ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಪ್ರಧಾನಿ ನಿರ್ಧರಿಸಿರುವುದು ತಡವಾಗಿಯಾದರೂ ಕೈಗೊಂಡ ತಕ್ಕ ಕ್ರಮ. ಇದಕ್ಕೆ ಉತ್ತರಪ್ರದೇಶ, ಪಂಜಾಬ್ ವಿಧಾನಸಭಾ ಚುನಾವಣೆ ಕಾರಣ ಇರಬಹುದು. ಉತ್ತರ ಪ್ರದೇಶದಲ್ಲಿ ಮಂಡಿ ಆದಾಯ ಒಂದೇ ವರ್ಷದಲ್ಲಿ ಒಂದು ಸಾವಿರ ಕೋಟಿ ರೂಪಾಯಿಯಷ್ಟು ಕುಸಿದಿದ್ದನ್ನು, ಹೊಸ ಎಪಿಎಂಸಿಗಳ ನಿರ್ಮಾಣವನ್ನು ತಡೆಹಿಡಿದಿರುವುದನ್ನು ಆ ಸರ್ಕಾರವೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿತ್ತು. ಪಂಜಾಬಿನಲ್ಲಿ ಅಕಾಲಿದಳವೂ ಈ ಕಾನೂನುಗಳ ಬಗೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಕರ್ನಾಟಕದ ಎಪಿಎಂಸಿಗಳಿಗೆ ಈಗ ಏನಾಗಿದೆ ಎಂಬ ಬಗ್ಗೆ ‘ಪ್ರಜಾವಾಣಿ’ ವರದಿಗಳನ್ನು ಪ್ರಕಟಿಸಿತ್ತು.