ಅನೇಕ ಶಾಲಾ ಕಾಲೇಜುಗಳ ಪ್ರಮುಖ ಸಮಾರಂಭಗಳಿಗೆ ಅತಿಥಿಗಳನ್ನಾಗಿ ರಾಜಕೀಯ ನಾಯಕರು, ಸಿನಿಮಾ ನಟರು ಹಾಗೂ ಸಾಧು ಸಂತರನ್ನು ಕರೆಸುತ್ತಾರೆ. ಅವರಿಂದ ಉನ್ನತ ವಿಚಾರ, ನೈತಿಕತೆ, ಆದರ್ಶದ ನುಡಿಗಳನ್ನು ಕೇಳುತ್ತಾರೆ. ನಮ್ಮ ದೇಶದ ಹಿರಿಮೆ, ಗರಿಮೆ ಬಗ್ಗೆ, ಸತ್ಯ, ಪ್ರಾಮಾಣಿಕತೆಯ ಬಗ್ಗೆ ಅತಿಥಿಗಳು ಮಾತನಾಡುತ್ತಾರೆ. ಆದರೆ ಹೀಗೆ ಮಾತನಾಡುವವರು ಸ್ವತಃ ಜೀವನದಲ್ಲಿ ನಡೆದುಕೊಳ್ಳುವ ರೀತಿ ಇದಕ್ಕಿಂತ ಭಿನ್ನವಾಗಿರುತ್ತದೆ. ಬೆಳಿಗ್ಗೆ ಕೊಟ್ಟ ಹೇಳಿಕೆಯನ್ನು ಸಂಜೆಯ ಹೊತ್ತಿಗೆ ತಾನು ಆ ಹೇಳಿಕೆ ಕೊಟ್ಟೇ ಇಲ್ಲ ಎಂದು ತಿರುಚಿ ಹೇಳುವವರಿದ್ದಾರೆ. ಮಕ್ಕಳು ಇಂತಹ ರಾಜಕೀಯ ನಾಯಕರ ಚಲನವಲನವನ್ನು ಮಾಧ್ಯಮಗಳ ಮೂಲಕ ಗಮನಿಸುತ್ತಿರುತ್ತಾರೆ.