ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಲಕ್ಷಾಂತರ ಮಕ್ಕಳು ಆಹಾರ ಸೇವಿಸುತ್ತಿದ್ದಾರೆ. ಮಕ್ಕಳ ದಾಖಲಾತಿ ಹಾಗೂ ಹಾಜರಾತಿಯಲ್ಲಿ ಗಣನೀಯ ಹೆಚ್ಚಳಕ್ಕೆ ಈ ಯೋಜನೆ ಪೂರಕವಾಗಿ ಒದಗಿಬಂದಿದೆ ಎಂಬ ಮಾತಿದೆ. ಇದು ಸ್ವಾಗತಾರ್ಹ.ಮಕ್ಕಳಿಗೆ ಪಾಠದ ಜೊತೆಗೆ ಸತ್ವಯುತ ಆಹಾರ ದೊರೆಯುತ್ತಿದೆ. ಇದರಿಂದಾಗಿ, ಕಲಿಕೆಯಲ್ಲಿ ಮಕ್ಕಳು ಹೆಚ್ಚು ಲವಲವಿಕೆಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಈಗ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದಲ್ಲಿ ಎರಡು ದಿನ ಮಕ್ಕಳಿಗೆ ಮೊಟ್ಟೆ ನೀಡಲು ಸರ್ಕಾರ ನಿರ್ಧರಿಸಿರುವುದು ಒಳ್ಳೆಯ ಉಪಕ್ರಮ. ಹೆಚ್ಚಿನ ಪೌಷ್ಟಿಕಾಂಶ ಇರುವ ಮೊಟ್ಟೆಯು ಮಕ್ಕಳ ಬೆಳವಣಿಗೆಗೆ ಸಹಕಾರಿ.