‘ಗೋಷಾ ಮತ್ತು ಪರದಾ ಪದ್ಧತಿ ಅನುಸರಿಸದಿರುವುದೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಹೆಚ್ಚಳಕ್ಕೆ ಕಾರಣ’ ಎನ್ನುವರು ಜನಪ್ರತಿನಿಧಿಯೊಬ್ಬರು. ಎಂತಹ ಅಪ್ರಬುದ್ಧ ಹೇಳಿಕೆ! ತಾವು ತಪ್ಪೇನೂ ಹೇಳಿಲ್ಲವೆಂದೇ ವಾದಿಸುತ್ತಿದ್ದ ಅವರು, ಹೈಕಮಾಂಡಿನ ತಪರಾಕಿಯಿಂದಾಗಿ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕಾಗಿ ಬಂತು. ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸುತ್ತೇವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹೇಳಿದ್ದಾರೆನ್ನಲಾದ ವಿಷಯ ಕುರಿತ ನಿಲುವಳಿ ಸೂಚನೆಯ ಬಗ್ಗೆ ಸದನದಲ್ಲಿ ಕಾವೇರಿದ ಚರ್ಚೆ ನಡೆಯುವ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷರನ್ನುದ್ದೇಶಿಸಿ ಸಚಿವರು, ‘ನಿಮ್ಮಪ್ಪ ದೇಶದ್ರೋಹಿ’ ಎಂದದ್ದು, ಅವರಿಬ್ಬರನ್ನೂ ಕೈ ಕೈ ಮಿಲಾಯಿಸುವ ಹಂತಕ್ಕೇ ಕೊಂಡೊಯ್ಯುತ್ತದೆ! ಕೆಪಿಸಿಸಿ ಅಧ್ಯಕ್ಷರ ತಂದೆಯ ಬಗ್ಗೆ ತಮಗೆ ಗೌರವವಿರುವುದಾಗಿಯೂ, ‘ನಿಮ್ಮಪ್ಪ ದೇಶದ್ರೋಹಿ’ ಎಂದು ಆಡುಭಾಷೆಯಲ್ಲಿ ನುಡಿದದ್ದಾಗಿಯೂ ಸಚಿವರು ಸಮಜಾಯಿಷಿ ನೀಡಲು ಮರೆಯುವುದಿಲ್ಲ! ಆಡುಭಾಷೆಯಲ್ಲಾದರೂ, ಆಡಬಾರದ ಮಾತನ್ನು ಆಡಬಹುದೇ?