ತುಮಕೂರು ಸಂಸದ ಜಿ.ಎಸ್.ಬಸವರಾಜ್ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡು ಛೀ... ಥೂ... ಎನ್ನುವ ಮಟ್ಟಕ್ಕೆ ಹೋಗಿದ್ದು ಜನಪ್ರತಿನಿಧಿಗಳ ಇನ್ನೊಂದು ಮುಖವನ್ನು ಜನರ ಮುಂದೆ ತೆರೆದಿಟ್ಟಿದೆ. ಚುನಾವಣೆಗೆ ಮೊದಲು ಆಶ್ವಾಸನೆ ನೀಡುತ್ತಾ, ಆಣೆ, ಪ್ರಮಾಣ ಹಾಕುತ್ತಾ, ಎಲ್ಲ ಹಂತದಲ್ಲಿಯೂ ಪ್ರಾಮಾಣಿಕವಾಗಿ ಮತ್ತು ಗೌರವಯುತವಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳುವ ರಾಜಕಾರಣಿ ಗಳು, ಆಯ್ಕೆಯಾದ ನಂತರ ತಮ್ಮ ನಾಲಿಗೆಯನ್ನು ಹರಿಬಿಟ್ಟು ಏಕವಚನದಲ್ಲಿ ಬೈದಾಡಿಕೊಂಡು ಅನಾಗರಿಕರ ರೀತಿಯಲ್ಲಿ ವರ್ತಿಸುತ್ತಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ತರುವ ವಿಷಯದಲ್ಲಿ ಪರಸ್ಪರರು ತಮ್ಮನ್ನು ಒರೆಗಲ್ಲಿಗೆ ಹಚ್ಚಿಕೊಂಡು ಮತದಾರನ ಮುಂದೆ ಬೆತ್ತಲಾಗಿದ್ದಾರೆ.