ಎರಡೂ ಪ್ರಕರಣಗಳಲ್ಲಿ ಸರ್ಕಾರದ ನೇರ ಪಾತ್ರವೇನಿರಲಿಲ್ಲ. ಬಸ್ ಮಾಲೀಕ, ಕಟ್ಟಡ ಮಾಲೀಕರ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ ಇತ್ತು. ಮಾನವೀಯತೆಯ ದೃಷ್ಟಿಯಿಂದ ಸರ್ಕಾರವು ಪರಿಹಾರ ನೀಡಿದೆಯಾದರೂ, ಹೀಗೆ ಮೊತ್ತ ನಿಗದಿಯಲ್ಲಿ ತಾರತಮ್ಯ ಮಾಡುವುದು ಅಸಮರ್ಥನೀಯ. ಇಂಥ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಯಾರಿಗೇ ಆದರೂ ಈ ಭೇದ ಎದ್ದು ಕಾಣುತ್ತದೆ. ಇಂಥ ಸಂಗತಿಗಳೇ ಮತ್ತೆ ಉತ್ತರ ಕರ್ನಾಟಕ- ದಕ್ಷಿಣ ಕರ್ನಾಟಕ, ಅನಾದರ- ಪ್ರತ್ಯೇಕತಾಭಾವ ಮೂಡಿಸುತ್ತವೆ. ಮಾನವೀಯತೆಯ ಸಂವೇದನೆಯನ್ನೇ ಕಳೆದುಕೊಂಡು, ಎಲ್ಲದರಲ್ಲಿಯೂ ಮತಬ್ಯಾಂಕ್ ರಾಜಕಾರಣ ಮಾಡಹೊರಟರೆ ನಾವು ಎಲ್ಲಿಗೆ ಹೋಗಿ ತಲುಪುತ್ತೇವೆ?