ಟಿ.ವಿ. ಚಾನೆಲ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಲೋಕಸಭೆ ಚುನಾವಣಾ ಜ್ವರ ಏರಿದೆ. ಇದು ಎಷ್ಟು ಮಿತಿಮೀರಿದೆಯೆಂದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಚಿತ್ರಗಳಿಗೆ ಯುದ್ಧದ ಪೋಷಾಕು ತೊಡಿಸಿ, ಕೈಗೆ ಗದೆ, ಕತ್ತಿ, ಗುರಾಣಿ ಕೊಟ್ಟು ಪರಸ್ಪರ ಸೆಣಸಾಡುವಂತೆ ಚಿತ್ರಿಸಿದ್ದಾರೆ. ಇದೆಷ್ಟು ಸರಿ? ಪ್ರಜಾಪ್ರಭುತ್ವದಲ್ಲಿ ಯುದ್ಧ ಮಾಡುವುದೆಂತು? ಈ ಒಂದು ಸಾಮಾನ್ಯ ಪ್ರಜ್ಞೆಯೂ ಹೀಗೆ ಚಿತ್ರಿಸಿದವರಿಗೆ ಇಲ್ಲವೇ? ಜನನಾಯಕರು ಅಭಿವೃದ್ಧಿಗೆ ಪೂರಕವಾಗಿ ಮಾಡಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ತೋರಿಸಲಿ. ಅದು ಬಿಟ್ಟು, ಹೀಗೆ ಮನಸ್ಸಿಗೆ ಬಂದಂತೆ ಅವರನ್ನು ಚಿತ್ರಿಸುವುದು ಬೇಸರ ತರಿಸುತ್ತದೆ.