‘ಮಂಡ್ಯ ಗರಿಷ್ಠ, ರಾಜಧಾನಿ ಕನಿಷ್ಠ’ ಶೀರ್ಷಿಕೆಯನ್ನು ಹೊತ್ತ ಮುಖಪುಟದ ಅಗ್ರ ಸುದ್ದಿ(ಪ್ರ.ವಾ., ಏ.19) ಓದಿದಾಗ, ಮತದಾನದ ಬಗೆಗೆ ನಗರವಾಸಿಗಳ ನಿರ್ಲಕ್ಷ್ಯ ಕಂಡು ಆಶ್ಚರ್ಯ ಮತ್ತು ಬೇಸರವಾಯಿತು.
ಬಹುತೇಕ ಸುಶಿಕ್ಷಿತ ಮತದಾರರೇ ಇರುವ ರಾಜ್ಯದ ರಾಜಧಾನಿಯಲ್ಲಿ ಹೀಗೆ ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯ ಬಗ್ಗೆ ಅಲಕ್ಷ್ಯ ತೋರಿಸಿರುವುದು ಅಕ್ಷಮ್ಯ. ಬಿರು ಬಿಸಿಲಿನ ನಡುವೆಯೂ ಬಹಳ ಉತ್ಸಾಹದಿಂದ ಗಣನೀಯ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಂಡ ಗ್ರಾಮೀಣ ಭಾಗಗಳ ಜನರು, ಮತ ಚಲಾಯಿಸಿದ ಸಂದರ್ಭದ ಕ್ಷಣಗಳನ್ನು ಸೆಲ್ಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು. ಇದು ನಗರವಾಸಿಗಳು ನಾಚಿಕೆಪಡುವಂತಿತ್ತು.
ವಿವಿಧ ವ್ಯಾಪಾರ, ಉದ್ಯೋಗ, ವ್ಯವಹಾರಗಳ ನಡುವಿನ ಯಾಂತ್ರಿಕ ಬದುಕಿಗೆ ಹೊಂದಿಕೊಂಡಿರುವ ಕೆಲವು ಬೆಂಗಳೂರಿಗರಲ್ಲಿ ಮಾನವೀಯ ಭಾವನೆಗಳಷ್ಟೇ ಅಲ್ಲದೆ, ವ್ಯವಸ್ಥೆಯೊಂದಿಗಿನ ಗುರುತರ ಹೊಣೆ ಗಾರಿಕೆಯೂ ಕಡಿಮೆಯಾಗುತ್ತಿದೆ ಎಂಬುದು ಬಿಂಬಿತವಾದಂತಿದೆ.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿಯಬೇಕಾದರೆ, ಪ್ರತಿ ಚುನಾವಣಾ ಪ್ರಕ್ರಿಯೆಯಲ್ಲೂ ಕಡ್ಡಾಯ ಮತದಾನ ನಿಯಮವನ್ನು ಜಾರಿಗೆ ತರುವ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಆಲೋಚಿಸಬೇಕಿದೆ. -ಹೊಡೇನೂರು ಪರಮೇಶ್,ಅರಕಲಗೂಡು