ರಾಜ್ಯದಲ್ಲಿ 45 ಸಾವಿರಕ್ಕೂ ಮಿಕ್ಕಿ ಕೆರೆಗಳಿದ್ದವೆಂದು ಕಂದಾಯ ಇಲಾಖೆಯ ದಾಖಲೆಗಳು ತಿಳಿಸುತ್ತವೆ. ಎರಡು ದಶಕಗಳಿಂದ ನಮ್ಮ ಜನಪ್ರತಿನಿಧಿಗಳು ಕೆರೆ ಹೂಳೆತ್ತುವ ಕುರಿತು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆದರೆ ಶೇ 10ರಷ್ಟು ಕೆರೆಗಳ ಪುನಶ್ಚೇತನ ಕಾಮಗಾರಿಯೂ ಆಗಿಲ್ಲ.
ಅರಣ್ಯ ಇಲಾಖೆ ವತಿಯಿಂದಲಾದರೂ ಪ್ರತಿವರ್ಷ ವಲಯ ವ್ಯಾಪ್ತಿಯಲ್ಲಿ ತಲಾ ಒಂದು ಕೆರೆಯ ಹೂಳೆತ್ತಿದ್ದರೂ 2–3 ಸಾವಿರ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ಜಲಾನಯನ, ಸಣ್ಣ ನೀರಾವರಿಯಂತಹ ಇಲಾಖೆಗಳು ಕೆರೆ ಜೀರ್ಣೋದ್ಧಾರ ಕಾರ್ಯ ಯೋಜನೆಯನ್ನು ಈ ತನಕವೂ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ.
ಕೇಂದ್ರ ಸರ್ಕಾರದ ಅನುದಾನ ಪಡೆದು ಕೆರೆಗಳನ್ನು ಸುಸ್ಥಿತಿಯಲ್ಲಿ ಇಡಬಹುದು. ಹಾಗೆ ಮಾಡದೆ, ಮಳೆ ಬಾರದಿದ್ದಾಗ ಬರ ಎಂದು ಗೋಳಾಡಿದರೆ ಪ್ರಯೋಜನವೇನು?
ಸಮರ್ಪಕವಾಗಿ ಕೆರೆಗಳ ಹೂಳೆತ್ತಿ, ಪುನರ್ ಜೀರ್ಣೋದ್ಧಾರ ಮಾಡುವ ಯೋಜನೆ ಭ್ರಷ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದಾಗಿ ಅನುಷ್ಠಾನವಾಗುತ್ತಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. -ಎಸ್.ಎನ್.ಅಮೃತ, ಪುತ್ತೂರು