ಮತದಾರರ ತೀರ್ಪು ನಗಣ್ಯವಾಗುತ್ತಿದೆ. ಮತ ನೀಡುವುದಷ್ಟೇ ನಿಮ್ಮ ಕೆಲಸ, ನಾವು ಯಾವುದೋ ಒಂದು ಗೂಡು ಸೇರಿ ಆಡಳಿತ ನಡೆಸುತ್ತೇವೆ ಎಂದು ಜನಪ್ರತಿನಿಧಿಗಳು ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ.ಆಯ್ಕೆಯಾದ ನಂತರ ಎಲ್ಲಿದ್ದರೇನಂತೆ, ಅಧಿಕಾರ ಮುಖ್ಯ ಎನ್ನುವ ಧೋರಣೆಯನ್ನು ರಾಜಕೀಯ ನಾಯಕರು ಅನುಸರಿಸುತ್ತಿದ್ದಾರೆ. ಕರ್ನಾಟಕದಲ್ಲೂ ಇದೇ ಅಸಹ್ಯ ರಾಜಕಾರಣವನ್ನು ಕಾಣುತ್ತಿದ್ದೇವೆ. ನಾವು ಏನನ್ನು ಬಯಸುತ್ತಿದ್ದೇವೆ? ಕೇವಲ ನಮಗಿಷ್ಟವಾದ ಪಕ್ಷದ ಆಡಳಿತವನ್ನೋ ಅಥವಾ ಪ್ರಜಾತಂತ್ರ ವ್ಯವಸ್ಥೆಯ, ಮೌಲ್ಯಗಳ ರಕ್ಷಣೆಯನ್ನೋ? ನಮ್ಮ ಅಭಿಪ್ರಾಯವನ್ನು ದಾಖಲಿಸುವ ಮಾರ್ಗವಾದರೂ ಎಲ್ಲಾದರೂ ಇದೆಯೇ? ಇಷ್ಟು ಅಸಹ್ಯ ರಾಜಕಾರಣವನ್ನು ಸಹಿಸಿಕೊಂಡಿರಬೇಕೇ? ಅನ್ಯ ಮಾರ್ಗವಾದರೂ ಏನು? ಈ ಪ್ರಶ್ನೆಗಳು ನಮ್ಮನ್ನು ಕಾಡಲೇಬೇಕಿದೆ. ಇಲ್ಲವಾದರೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಮಗೆ ಇರಲು ಸಾಧ್ಯವೇ ಇಲ್ಲ.