ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಗಣ್ಯರ ವಾಹನಗಳಿಗೆ ನೀಡಿದ್ದ ಅನುಮತಿ ಪತ್ರದಲ್ಲಿ ‘ಕಾರ್ಯಧ್ಯಕ್ಷರು’ ಎಂದು ಮುದ್ರಿಸಲಾಗಿತ್ತು. ಇದನ್ನು ಕಣ್ತಪ್ಪಿನಿಂದಾದ ಮುದ್ರಣ ದೋಷ ಇರಬಹುದೆಂದು ಕ್ಷಮಿಸಬಹುದು. ಆದರೆ ಆಕಾಶವಾಣಿಯಿಂದ ಬಿತ್ತರಗೊಳ್ಳುವ ಕನ್ನಡ ಭಾಷೆಯಲ್ಲಿ ‘ಆಕಾಶವಾಣಿ ಧಾರವಾಡ’ ಎಂಬುದನ್ನು ‘ಆಕಾಶವಾಣಿ ಧಾರವಾಡ್’ ಎಂದು ಉಚ್ಚರಿಸುವುದಕ್ಕೆ ಏನೆಂದು ಹೇಳುವುದು? ಈ ಕುರಿತು ಆಕಾಶವಾಣಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದರೂ ಪ್ರಯೋಜನವಾಗಿಲ್ಲ.
ಹೀಗೆಯೇ, ವಿದ್ಯುತ್ ಸ್ಪರ್ಶಕ್ಕೆ ಒಳಗಾದವರನ್ನು ‘ಕಡ್ಡಿಯಿಂದ ನೂಕಿರಿ’ ಎಂಬುದನ್ನು ಕೇಳಿ, ಆಕಾಶವಾಣಿಯ ಬೆಂಗಳೂರಿನ ಅಧಿಕಾರಿಗಳಿಗೆ ‘ಕಡ್ಡಿ ಅಲ್ಲ, ಒಣಗಿದ ಕಟ್ಟಿಗೆ’ ಎಂದು ಪತ್ರ ಬರೆದಿದ್ದೆ. ಅವರು ಸುಧಾರಿಸಿಕೊಂಡು ಈಗ ‘ಒಣಗಿದ ಕಟ್ಟಿಗೆಯಿಂದ ನೂಕಿರಿ’ ಎಂದು ಹೇಳುತ್ತಿದ್ದಾರೆ.
‘ಸಂಗೀತಗಾರರ ಪ್ರತಿಭೆಯನ್ನು ಓರೆ ಹಚ್ಚಿ ನೋಡುವುದು’ ಎಂದು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿತ್ತು. ‘ಓರೆ ಅಲ್ಲ, ಅದು ಒರೆಗೆ ಹಚ್ಚುವುದು’ ಎಂದು ಮೇಲಿಂದ ಮೇಲೆ ಪತ್ರ ಬರೆದರೂ ತಿದ್ದಿಕೊಳ್ಳಲಿಲ್ಲ. ಹೀಗಾದರೆ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.