ಲಾಕ್ಡೌನ್ನಿಂದಾಗಿ ಹಣ್ಣುಗಳ ಮಾರಾಟಕ್ಕೆ ತೊಂದರೆಯಾಗಿರುವುದರಿಂದ, ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಿದ್ರಿ ಸತೀಶ್ ಅವರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಮನೆಗಳಿಗೆ ಉಚಿತವಾಗಿ ಹಂಚಿರುವುದು ಶ್ಲಾಘನೀಯ (ಪ್ರ.ವಾ., ಏ. 3). ಇದು ದೇಶದ ಅನ್ನದಾತರಿಗೆಲ್ಲರಿಗೂ ಮಾದರಿಯಾದ ಕಾರ್ಯ. ತಾವು ಬೆಳೆದ ಹಣ್ಣು, ತರಕಾರಿಯನ್ನು ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ರೈತರು ರಸ್ತೆಗೆ, ಚರಂಡಿಗೆ ಎಸೆಯುತ್ತಿರುವ ಸುದ್ದಿಯನ್ನು ಇತ್ತೀಚೆಗೆ ಮಾಧ್ಯಮಗಳಿಂದ ತಿಳಿದು ಮನಸ್ಸು ಮರುಗುತ್ತಿತ್ತು. ಆದರೆ ಸ್ವಲ್ಪ ಸಕಾರಾತ್ಮಕವಾಗಿ ಚಿಂತಿಸಿದರೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಸಮಾಜದ ಸ್ವಾಸ್ಥ್ಯಕ್ಕೆ ಒಂದಿಷ್ಟು ಒಳಿತು ಮಾಡಬಹುದು ಎನ್ನಿಸಿತು.