ನಾವು ಇಂದು ಅತ್ಯಂತ ಆತಂಕದ ಸಂದರ್ಭದಲ್ಲಿ ಬದುಕುತ್ತಿದ್ದೇವೆ. ಒಂದೆಡೆ, ವಲಸೆ ಕಾರ್ಮಿಕರಿಗೆ ಅನ್ನ ಕೊಡುತ್ತಿರುವ ಜರೀನ್ ತಾಜ್ ಮತ್ತು ಅವರ ತಂಡದ ಮೇಲೆ ದಾಳಿಯಾಗುತ್ತದೆ. ಇನ್ನೊಂದೆಡೆ, ವಲಸೆ ಕಾರ್ಮಿಕರ ಮೇಲೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತದೆ. ಸುಳ್ಳು ಸುದ್ದಿ ಹಾಗೂ ಕೋಮುದ್ವೇಷದ ವಿರುದ್ಧ ಪ್ರಧಾನಿ ಮತ್ತು ಮುಖ್ಯಮಂತ್ರಿ ಎಚ್ಚರಿಕೆ ಕೊಡುತ್ತಾರೆ. ಆದರೆ ಸಂಸದರೊಬ್ಬರು, ವಿಶ್ವದಾದ್ಯಂತ ಹರಡಿರುವ ಕೊರೊನಾ ಹಾಗೂ ಭಯೋತ್ಪಾದನೆಗೆ ಸಂಬಂಧ ಕಲ್ಪಿಸುತ್ತಾರೆ. ಮತ್ತೊಬ್ಬರು ‘ಕೊರೊನಾ ಜಿಹಾದ್’ ಎಂಬ ಹೊಸ ಪದವನ್ನು ಸೃಷ್ಟಿ ಮಾಡುತ್ತಾರೆ. ಜನರಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಯೊಬ್ಬರು ‘ಅವರನ್ನು ಗುಂಡಿಟ್ಟು ಕೊಲ್ಲಿ’ ಎಂದು ಕೂಗುತ್ತಾರೆ. ಈ ಬಗೆಯ ‘ನಾವು’ ಮತ್ತು ‘ಅವರು’ ಎಂಬಂತಹ ದಾರುಣ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಹಾಗೂ ಪ್ರಜ್ಞಾವಂತ ಚಿಂತಕರು ಮಾತ್ರ ಜನರಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಭರವಸೆಯನ್ನು ಉಂಟುಮಾಡಬಹುದು.