ಮೇ ತಿಂಗಳಲ್ಲಿ ಬಿದ್ದ ಮಳೆಗೆ ನಮ್ಮ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡವು. ಹೊಲಗಳನ್ನು ಟ್ರ್ಯಾಕ್ಟರ್ನ ನೇಗಿಲು, //ಬಲರಾಮ// ಬಳಸಿ ಹದ ಮಾಡುವಾಗ ಬೆಳ್ಳಕ್ಕಿ, ಮೈನಾ, ಮಡಿವಾಳ, ಕಾಜಾಣ ಇನ್ನೂ ಮುಂತಾದ ಪಕ್ಷಿಗಳು ಹಿಂಡು ಹಿಂಡಾಗಿ ಬಂದು, ಮಣ್ಣಿನಿಂದ ಮೇಲೆ ಬರುವ ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನುತ್ತವೆ. ಪಕ್ಷಿಗಳು ಬರಲೆಂದೇ ರೈತರು ಮಂಡಕ್ಕಿ ಚೆಲ್ಲಿ ಅವುಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಆದರೆ, ಈ ಬಾರಿ ಟ್ರ್ಯಾಕ್ಟರ್ನ ನೇಗಿಲ ಹಿಂದೆ ಹುಳು ಹುಪ್ಪಟೆಗಳನ್ನು ಹಿಡಿದು ತಿನ್ನಲು ಪಕ್ಷಿಗಳೇ ಬರಲಿಲ್ಲ. ಮಳೆಗಾಲದ ಆರಂಭದಲ್ಲಿ ಹೀಗಾಗಿರಬಹುದೆಂದು ಅಲಕ್ಷಿಸಿದೆವು. ಕೆಲದಿನಗಳ ನಂತರ ಮತ್ತೆ ಮಳೆಯಾಗಿ, ಬೇರೆ ಬೇರೆ ಹೊಲಗಳನ್ನು ಉಳುಮೆ ಮಾಡುವಾಗಲೂ ನಿರೀಕ್ಷಿಸಿದಷ್ಟು ಪಕ್ಷಿಗಳು ಬರಲೇ ಇಲ್ಲ.