ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿ.ಇ ಕಲಿಕೆಗೆ ರಾಜ್ಯವನ್ನು ಅತ್ಯುತ್ತಮ ತಾಣವನ್ನಾಗಿ ಬೆಳೆಸುವ ಉದ್ದೇಶದ ‘ಡೆಸ್ಟಿನೇಷನ್ ಕರ್ನಾಟಕ’, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷದ ಬಿ.ಎಸ್ಸಿ (ಆನರ್ಸ್) ಪದವಿ ಮತ್ತು ಕನ್ನಡ ಮಾಧ್ಯಮದಲ್ಲೂ ಬಿ.ಇ ಬೋಧನೆಗೆ ಹಸಿರು ನಿಶಾನೆ ತೋರಿಸಿರುವುದು (ಪ್ರ.ವಾ., ಅ. 13) ಸ್ವಾಗತಾರ್ಹ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣಕ್ಕೂ ಅವಕಾಶ ಕಲ್ಪಿಸಬೇಕು. ಬಿ.ಇ. ಹಾಗೂ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಪಾರಿಭಾಷಿಕ ಪದಗಳನ್ನು ಕನ್ನಡೀಕರಿಸಲು ಅನುವು ಮಾಡಿಕೊಡಬೇಕು. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯವಾಗುವುದರ ಜೊತೆಗೆ ಕನ್ನಡ ಭಾಷೆಗೆ ಮನ್ನಣೆ ಕೊಟ್ಟಂತೆಯೂ ಆಗುತ್ತದೆ.