‘ಪ್ರಜಾವಾಣಿ’ಯ ಏ. 8ರ ಸಂಚಿಕೆಯು ಸುದ್ದಿಪತ್ರಿಕೆಯೊಂದರ ಆದರ್ಶ ಮಾದರಿಯಂತೆ ಮೂಡಿಬಂದಿದೆ. ಮೊದಲ ಪುಟದಲ್ಲಿ ‘ಹಸಿದವರಿಗಾಗಿ ಸೈಟು ಮಾರಾಟ’ ಎಂಬ ಶೀರ್ಷಿಕೆಯಡಿ ಬಂದಿರುವ ಮುಸ್ಲಿಂ ಸೋದರರ ಸೇವೆಯ ಸುದ್ದಿ ಇಂದಿಗೆ ಬೇಕಾಗಿತ್ತು. ಈ ಸುದ್ದಿಯ ಪಕ್ಕದಲ್ಲೇ, ಮುಸ್ಲಿಮರು ಸೋಂಕು ಹಬ್ಬಿಸುವರೆಂಬ ‘ಭಯ’ದಿಂದ ಅವರ ‘ಗ್ರಾಮ ಪ್ರವೇಶಕ್ಕೆ ವಿರೋಧ’ ಮಾಡಿದ ಮಾಹಿತಿಯು ಇಂದಿನ ವಿಷಮಸ್ಥಿತಿಯನ್ನು ತಿಳಿಸುತ್ತದೆ. ನನ್ನ ಅಭಿಪ್ರಾಯದಲ್ಲಿ, ಎರಡು–ಮೂರು ದಿನ ತಡವಾಗಿದ್ದರೂ ‘ಸಾಂಕೇತಿಕ ಆಚರಣೆಸಾಕು, ಕ್ರಿಯಾಯೋಜನೆ ಬೇಕು’ ಎಂಬ ಅರ್ಥಪೂರ್ಣಸಂಪಾದಕೀಯವು ಒಂದು ದಿಕ್ಸೂಚಿಯಾಗಿದೆ. ಕೆಲವೊಮ್ಮೆ ಮಾತ್ರಸಂಕೇತಗಳಿಗೆ ಒಂದಿಷ್ಟು ಅರ್ಥವಿರುತ್ತದೆ. ಆದರೆ ಸಂಕೇತಗಳು ನಿಜದ ನೆಲೆಗಳಿಂದ ಮನಸ್ಸನ್ನು ಬೇರೆಡೆ ಸೆಳೆಯುವ ಸಾಧನಗಳಾಗಬಾರದು. ಸಂಕೇತಗಳನ್ನು ಮೀರಿದ ಪ್ರತೀಕಾತ್ಮಕ ಕ್ರಿಯಾರೂಪಗಳು ಹೆಚ್ಚು ಅರ್ಥಪೂರ್ಣವೂ ಉಪಯುಕ್ತವೂ ಆಗುತ್ತವೆ. ಅದೇನೇ ಇರಲಿ, ಸಂಕೇತಗಳ ಮಿತಿಯನ್ನು ಮೀರಿದ ಕ್ರಿಯಾಯೋಜನೆಗೆ ಒತ್ತಾಯಿಸಿದ್ದು ಸರಿಯಾಗಿದೆ.