ನಿರ್ಗತಿಕರು, ಭಿಕ್ಷುಕರು, ಕೈಲಾಗದವರೆಲ್ಲ ಕೇಂದ್ರದ ಒಂದೇ ಕುಟುಂಬದ ಸದಸ್ಯರಂತೆ ಕೂಡಿ ಬಾಳಿದ್ದು
ವರ್ಣಿಸಲಸದಳ. ಆದರೆ ಲಾಕ್ಡೌನ್ ತೆರವಾದ ನಂತರ ಆ ವ್ಯವಸ್ಥೆ ಸ್ಥಗಿತವಾಗಿ, ಭಿಕ್ಷುಕರೆಲ್ಲ ಪುನಃ ಬೀದಿಗೆ ಬಿದ್ದಿದ್ದಾರೆ. ತಾಲ್ಲೂಕುಗಳಲ್ಲಿ ಇಂತಹ ನಿರಾಶ್ರಿತರ ಶಿಬಿರಗಳನ್ನು ಶಾಶ್ವತವಾಗಿ ತೆರೆಯುವ ಅಗತ್ಯವಿಲ್ಲದಿದ್ದರೂ ಕೊರೊನಾ ಸಂಕಷ್ಟದ ಈ ಸಮಯದಲ್ಲಿ, ಯಾವುದಾದರೂ ಒಂದು ಸ್ಥಳವನ್ನು ಗುರುತಿಸಿ ಭಿಕ್ಷುಕರು, ಕೈಲಾಗದವರಿಗೆ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಅನ್ನ, ಸಾರನ್ನಾದರೂ ನೀಡಬೇಕು. ಹೀಗೆ ಮೊದಲು ಇಂತಹವರ ಹಸಿವು ನೀಗಿಸಿ, ಬಳಿಕ ಅವರ ಜೀವನ, ವೃತ್ತಿ, ಆರೋಗ್ಯದ ಕಡೆ ಗಮನ ಹರಿಸಬಹುದು.