ಸಮಾಜಸೇವೆ ಎಂದರೆ ಹಣ, ಅಧಿಕಾರ ಮತ್ತು ಅಂತಸ್ತು ಇದ್ದವರು ತಮ್ಮ ಹುಟ್ಟುಹಬ್ಬದಂದು ಆಸ್ಪತ್ರೆಯ ರೋಗಿಗಳಿಗೆ ಎರಡು ಹಣ್ಣು ಕೊಟ್ಟು ದೊಡ್ಡ ಫೋಟೊ ತೆಗೆಸಿಕೊಳ್ಳುವುದು, ಶಾಲಾ ಮಕ್ಕಳಿಗೆ ತಮ್ಮ ಭಾವಚಿತ್ರ ಸಹಿತ ನೋಟ್ ಪುಸ್ತಕಗಳನ್ನು ಕೊಡುವುದು, ಇತ್ತೀಚೆಗೆ ಆಹಾರ ಸಾಮಗ್ರಿಗಳ ಕಿಟ್ ಕೊಟ್ಟು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿಕೊಳ್ಳುವುದು ಎಂಬಂತಾಗಿದೆ. ಆದರೆ ಇದರಾಚೆಗೆ, ಕಷ್ಟದಲ್ಲಿ ಇರುವವರಿಗೆ ತನ್ನಿಂದ ಮಾಡಲಾಗುವ ಸಣ್ಣ ಸಹಾಯವೂ ಸಮಾಜಸೇವೆ ಎಂಬುದನ್ನು ಉಡುಪಿಯ ರಾಜೀವಿ ತೋರಿಸಿಕೊಟ್ಟಿದ್ದಾರೆ. ಆಟೊ ಚಾಲಕಿ ಹಾಗೂ ಆಶಾ ಕಾರ್ಯಕರ್ತೆಯಾಗಿರುವ ಅವರು, ಮಧ್ಯರಾತ್ರಿ ಊರಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ 18 ಕಿ.ಮೀ. ಆಟೊ ಚಲಾಯಿಸಿಕೊಂಡು ಹೋಗಿ ದೂರದ ಆಸ್ಪತ್ರೆಗೆ ಸೇರಿಸಿದ್ದಾರೆ.