ನೋಂದಣಿಯಾದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳು ಸಿಗುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ ಹಬ್ಬಗಳು, ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಹಬ್ಬದ ಸಂದರ್ಭಗಳಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟ ದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಬೇಕು. ನೋಂದಣಿಯಾಗುವವರಿಗೆ ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನದಂತಹ ಹಬ್ಬಗಳಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರಕುವಂತೆ ಮಾಡಬೇಕು. ವಿದ್ಯುನ್ಮಾನ ಪ್ರಪಂಚದಲ್ಲಿ ಹಣ ಪಾವತಿ ಡಿಜಿಟಲ್ ರೂಪದಲ್ಲಿರುವಾಗ, ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡುವವರಿಗೆ ಸರಳ ರೀತಿಯಲ್ಲಿ ಹಣ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ, ಪರಿಷತ್ತು ಆರ್ಥಿಕ ಚೈತನ್ಯ ಹೊಂದಲು ಅನುಕೂಲವಾಗುತ್ತದೆ. ಅಷ್ಟಲ್ಲದೆ ಕನ್ನಡ ಸಾಹಿತ್ಯ
ಸಮ್ಮೇಳನದಂತಹ ಕನ್ನಡ ಹಬ್ಬದಲ್ಲಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಕನ್ನಡಿಗರಿಂದಲೇ ಕ್ರೋಡೀಕರಿಸಲು ಸಹ ಸಹಾಯಕವಾಗುತ್ತದೆ. ಇದರಿಂದ ಯಾರನ್ನೂ ಅವಲಂಬಿಸದೆ ಕನ್ನಡಿಗರಿಂದಲೇ ಕನ್ನಡದ ಹಬ್ಬವನ್ನು ಆಚರಿಸಲು ಸಾಧ್ಯವಾಗುವುದು.