ಹಿಂದೂಗಳಲ್ಲಿ ಜಗತ್ತಿನ ಪರಿಪಾಲಕನಾದ ವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿ ಎಂಬ ಇಬ್ಬರು ಹೆಂಡತಿಯರು ಎಂಬ ಪೌರಾಣಿಕ ದೃಷ್ಟಿ ಇದೆ. ಅವರಲ್ಲಿ ಶ್ರೀದೇವಿಗೆ ಅಂದರೆ ಲಕ್ಷ್ಮಿಗೆ ಇರುವ ಪ್ರಾಧಾನ್ಯ ಭೂದೇವಿಗೆ ಇಲ್ಲ. ರೈತರಲ್ಲಿ ಭೂಮಿಯನ್ನು (ಭೂದೇವಿಯೆಂದು) ಆಗೀಗ ಸಾಂಕೇತಿಕವಾಗಿ ಪೂಜಿಸುವ ಹಬ್ಬ- ಆಚರಣೆಗಳಿದ್ದರೂ ವ್ಯಾಪಾರಿಗಳು ಆರಾಧಿಸುವ ಲಕ್ಷ್ಮಿಪೂಜೆಯ ಮುಂದೆ ಅದೇನೂ ಅಲ್ಲ. ಶ್ರಮಶಕ್ತಿಯ ಆರಾಧನೆಯ ಜಾಗವನ್ನು ಅದರ ಸೃಷ್ಟಿಯಾದ ವಸ್ತುಗಳ ಆರಾಧನೆ, ವಸ್ತುಗಳ ಆರಾಧನೆಯ ಜಾಗವನ್ನು ಅವುಗಳ ವ್ಯಾಪಾರದ ಸಂಕೇತವಾದ ಹಣದ ಆರಾಧನೆಗಳು ಆಕ್ರಮಿಸಿಕೊಂಡಿವೆ. ಶ್ರಮಸಂಸ್ಕೃತಿಯನ್ನು ತುಳಿದು ಭೂಮಿಯನ್ನು ತನ್ನ ಅಡಿಯಾಳಾಗಿಸುವ ಇಂದಿನ ವ್ಯಾಪಾರೀ ಸಂಸ್ಕೃತಿಯಲ್ಲಿ ಲಕ್ಷ್ಮಿಯು ಶ್ರಮಶಕ್ತಿ ಮತ್ತು ಭೂಮಿಯ ಸಂಕೇತವಷ್ಟೆ. ಹೀಗಾಗಿ ಲಕ್ಷ್ಮಿಪೂಜೆಯೆಂದರೆ, ಮೂಲದೇವರನ್ನು ಮೂಲೆಗೆ ತಳ್ಳಿ ಅದರ ಸಂಕೇತವನ್ನು ಮಾತ್ರ, ಅದು ಕೇವಲ ಸಂಕೇತವೆಂಬ ಪ್ರಜ್ಞೆಯೂ ಇಲ್ಲದೆ ಪೂಜಿಸುವ ಸಂಕೇತಾರಾಧನೆ ಮಾತ್ರ.