ಈಗ ಚುನಾವಣೆ ಬರಲಿದೆ ಎಂಬ ಕಾರಣಕ್ಕಾಗಿ ಸುಮಾರು 70 ದಿನಗಳ ತಯಾರಿ ನಡೆಸಿ ಮಾರ್ಚ್ 31ರೊಳಗೆ ಮುಗಿಸುವುದು ಸರಿಯಲ್ಲ. ಲಾಂಛನ, ಸಮಿತಿ ರಚನೆ ನಡೆಯಬಹುದು. ಆದರೆ ಅಸಲಿ ಉದ್ದೇಶ (ಗುಣಮಟ್ಟದ ಚಿತ್ರಗಳು, ಅರ್ಥಪೂರ್ಣ ಕಾರ್ಯಕ್ರಮ) ಸಾಧನೆ ಕಷ್ಟಸಾಧ್ಯ. ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಹಿಂದಿಗಿಂತ ಹೆಚ್ಚು ಹಣ ನೀಡಲಾಗಿತ್ತು. ಆದರೆ ಮೊದಲ ದಿನ ಸರಿಯಾಗಿ ನಡೆಯಲಿಲ್ಲ. ಬೇರೆ ಕಾರಣಕ್ಕೆ ಅದು ವಿವಾದಾಸ್ಪದವೂ ಆಯಿತು. ಚಲನಚಿತ್ರೋತ್ಸವಕ್ಕೆ ಒಂದು ಕೋಟಿ ಹೆಚ್ಚು ನೀಡಬಹುದು, ಉದ್ಘಾಟನೆಗೆ ಹೆಚ್ಚು ವೆಚ್ಚ ಮಾಡಲೂಬಹುದು- ಆದರೆ ಪಾರದರ್ಶಕವಾಗಿ ನಡೆಸದಿದ್ದರೆ ಆರೋಪಗಳು ಬರುವ ಸಂಭವ ಹೆಚ್ಚು. ಅಂತರರಾಷ್ಟ್ರೀಯ ಮಾನ್ಯತೆ, ಧನಸಹಾಯಕ್ಕಿಂತ ಎಲ್ಲರನ್ನೂ ಒಳಗೊಂಡ ಚಿತ್ರೋತ್ಸವ ನಡೆಸುವುದು ಮುಖ್ಯವಾಗಬೇಕು. ಹಲವರ ಅಭಿಪ್ರಾಯದಂತೆ ಡೈರಕ್ಟರೇಟ್ ಒಂದನ್ನು ಸ್ಥಾಪಿಸಿ ಈ ಚಿತ್ರೋತ್ಸವದ ಆಯೋಜನೆಯನ್ನು ಅದಕ್ಕೆ ವಹಿಸಬೇಕು (ಅಕಾಡೆಮಿ, ಸಚಿವ ಅಥವಾ ವಾರ್ತಾ ಇಲಾಖೆ ನಿರ್ದೇಶಕರಿಗೆ ಅಲ್ಲ). ಆರ್ಟಿಸ್ಟಿಕ್ ಡೈರೆಕ್ಟರ್ ಈ ಬಗೆಗೆ ಗಟ್ಟಿ ನಿಲುವು ತಾಳುತ್ತಾರೆಯೇ?
–ಎಚ್.ಎಸ್.ಮಂಜುನಾಥ, ಗೌರಿಬಿದನೂರು