ಮಧ್ಯಾಹ್ನದ ಊಟದ ಬಳಿಕ ಆಶ್ರಮವಾಸಿಗಳ ಮಕ್ಕಳ ಆಟವನ್ನು ನೋಡುತ್ತಾ ಕಸ್ತೂರ ಬಾ ವಿಶ್ರಾಂತಿ ಪಡೆಯುತ್ತಿದ್ದರು. ತಕ್ಷಣ ಅವರಿಗೆ ಅಂದು ಕೃಷ್ಣ ಜನ್ಮಾಷ್ಟಮಿ ಎಂಬುದು ನೆನಪಾಯಿತು. ಮಕ್ಕಳಿಗೆ ಹೆಸರುಬೇಳೆ ಪಾಯಸ ಎಂದರೆ ಅಚ್ಚುಮೆಚ್ಚು. ರಾತ್ರಿ ಊಟದ ಸಂಗಡ ಪಾಯಸ ನೀಡಿದರೆ ಸಂತೋಷದಿಂದ ಸವಿಯುತ್ತಾರೆ ಎಂದು ಯೋಚಿಸಿ, ಪಾಯಸ ಸಿದ್ಧಪಡಿಸುವಂತೆ ಆಶ್ರಮದ ವ್ಯವಸ್ಥಾಪಕರಿಗೆ ಹೇಳುತ್ತಾರೆ. ಇದನ್ನು ನಿರಾಕರಿಸುವ ವ್ಯವಸ್ಥಾಪಕ, ಸಾರ್ವಜನಿಕರ ದೇಣಿಗೆ ಹಣದಲ್ಲಿ ಆಶ್ರಮ ನಡೆಯುತ್ತಿದೆ, ನಮ್ಮಿಷ್ಟದಂತೆ ಹಣದ ಬಳಕೆ ಸಾಧ್ಯವಿಲ್ಲ, ಇದನ್ನು ಬಾಪೂ ಅವರೂ ಒಪ್ಪುವುದಿಲ್ಲ ಎನ್ನುತ್ತಾರೆ. ತಕ್ಷಣ ಕಸ್ತೂರ ಬಾ ಸ್ವತಃ ಪಾಯಸ ಮಾಡಿ ಮಕ್ಕಳಿಗೆ ನೀಡಿ, ತಾವು ನಾಳೆಯಿಂದ ಎರಡು ದಿನಗಳ ಕಾಲ ಉಪವಾಸ ಮಾಡುವ ಮೂಲಕ ಪಾಯಸದ ಬಾಬ್ತು ಖರ್ಚಾದ ಹೆಚ್ಚುವರಿ ಹಣವನ್ನು ಸರಿದೂಗಿಸಲು ನಿರ್ಧರಿಸುತ್ತಾರೆ.