ಶಾಲಾ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಅದನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ‘ಪ್ರಜಾವಾಣಿ’ಯ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾನಸಿಕ ತಜ್ಞ ಡಾ. ಬಿ.ವಿನಯ್ ಹೇಳಿದ್ದಾರೆ (ಪ್ರ.ವಾ., ಫೆ. 13). ಇಂತಹ ಭಯಕ್ಕೆ ಮುಖ್ಯ ಕಾರಣ, ಪರೀಕ್ಷೆಯು ಕಲಿಕಾ ಪರೀಕ್ಷೆಯಾಗದೆ ಸ್ಪರ್ಧಾತ್ಮಕ ಪರೀಕ್ಷೆಯಾಗಿ ಪರಿವರ್ತನೆಗೊಂಡಿರುವುದು. ಪೋಷಕರಿಗೆ ಇದು ‘ಅಹಂ’ ಪರೀಕ್ಷೆಯಾದರೆ, ಶಿಕ್ಷಕರಿಗೆ ‘ಸಾಧನೆ’ಯ ಪರೀಕ್ಷೆ ಹಾಗೂ ವಿದ್ಯಾರ್ಥಿಗಳಿಗೆ ‘ಭವಿಷ್ಯ’ದ ಪರೀಕ್ಷೆಯಾಗಿ ಮಾರ್ಪಟ್ಟಿದೆ. ಎಲ್ಲದಕ್ಕೂ ಅಂತಿಮ ಗ್ರಾಹಕರೆಂದರೆ ವಿದ್ಯಾರ್ಥಿಗಳು. ಹಾಗಾಗಿ, ಅನೇಕ ವಿದ್ಯಾರ್ಥಿಗಳಿಗೆ ಇದು ಹಬ್ಬವಾಗದೆ ಒತ್ತಡ ಎನಿಸುತ್ತದೆ. ಸಂತಸದ ಕಲಿಕೆಯನ್ನು ಕಾಣಬೇಕೆಂದರೆ, ವಿದ್ಯಾರ್ಥಿಗಳಿಗೆ ಕುತೂಹಲದ ಪ್ರಶ್ನೆಗಳನ್ನು ನೀಡುವುದು ಅವಶ್ಯ.