ಮತ ಯಾಚಿಸುವಾಗ ಎಲ್ಲ ಸಮುದಾಯಗಳ ನಾಯಕರೂ ಇಂತಹ ಆಣಿಮುತ್ತುಗಳನ್ನೇ ಉದುರಿಸಿದರೆ, ಭವಿಷ್ಯದ ಪ್ರಜಾಪ್ರಭುತ್ವವನ್ನು ಊಹಿಸಿ ಕೊಳ್ಳಲೂ ಅಸಾಧ್ಯ. ಹೀಗೆ ಮಾಡಿದರೆ ಸಂವಿಧಾನಕ್ಕೆ ಅಪಚಾರ ಬಗೆದಂತೆ ಆಗುವುದಿಲ್ಲವೇ? ಜಾತಿಯ ಆಧಾರದ ಮೇಲೇ ಮತ ನೀಡಲು ಮತದಾರನನ್ನು ಪ್ರೇರೇಪಿಸಿದಂತೆ ಆಗುವುದಿಲ್ಲವೇ? ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ನಮಗೆ ಇಂತಹ ನಡೆಗಳು ಗೌರವ ತರುತ್ತವೆಯೇ? ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತೇವೆಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಹಿಡಿಯುವ ನಾಯಕರು, ಅದನ್ನು ಉಲ್ಲಂಘಿಸಿಯೇ ತೀರುತ್ತೇವೆಂದು ಮರುಗಳಿಗೆಯೇ ಮನದಲ್ಲಿ ಪ್ರಮಾಣ ಮಾಡಿರುತ್ತಾರೆ ಎನಿಸುತ್ತದೆ. ಯಾವುದೇ ಪಕ್ಷ ಅಥವಾ ನಾಯಕ ತನ್ನ ಹಿಂದಿನ ಸಾಧನೆಯ ಆಧಾರದ ಮೇಲೆ ಮತ್ತು ಮುಂದೆ ಮಾಡಲಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮತದಾರನಿಗೆ ಮನವರಿಕೆ ಮಾಡಿಕೊಟ್ಟು ಮತ ಯಾಚಿಸಬೇಕೇ ಹೊರತು, ಅಡ್ಡ ಮಾರ್ಗಗಳಿಂದಲ್ಲ ಎಂಬುದನ್ನು ಅರಿತರೆ ಲೇಸು.