‘ರೋಗಿಗೆ ಕುರ್ಚಿಯೇ ಆಂಬುಲೆನ್ಸ್’ ಎಂಬ ಸುದ್ದಿ (ಪ್ರ.ವಾ., ಮಾರ್ಚ್ 5) ಓದಿ ದುಃಖವಾಯಿತು. 21ನೇ ಶತಮಾನದಲ್ಲಿದ್ದೇವೆ ಎಂದು ನಾವೆಲ್ಲರೂ ಬೀಗುತ್ತಿರುವಾಗ, ಅಂಕೋಲ ತಾಲ್ಲೂಕಿನ ವರೀಲಬೇಣ ಎಂಬ ಗ್ರಾಮದಲ್ಲಿ ಸಂಪರ್ಕ ರಸ್ತೆಯಿಲ್ಲದೆ ಊರವರು ಪಡುತ್ತಿರುವ ಕಷ್ಟ ನೋಡಲಾಗದು. ಇತ್ತೀಚೆಗೆ ರೋಗಿಯೊಬ್ಬರನ್ನು ಬೆತ್ತದ ಕುರ್ಚಿಯಲ್ಲಿ ಕುಳ್ಳಿರಿಸಿ, ಆ ಕುರ್ಚಿಗೆ ಕೋಲು ಕಟ್ಟಿ, ಕೋಲನ್ನು ಕೆಲವರು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಬೇಕಾಗಿ ಬಂದದ್ದು ದುರದೃಷ್ಟಕರ. ಇಂತಹ ಸ್ಥಿತಿಯಲ್ಲಿ ಕರೆದೊಯ್ಯುವ ರೋಗಿಗಳು ತೀವ್ರವಾಗಿ ಅಸ್ವಸ್ಥರಾಗಿದ್ದರೆ ಪಟ್ಟಣಕ್ಕೆ ಬರುವಷ್ಟರಲ್ಲಿ ಅವರು ಅರೆಜೀವವಾಗಿರುತ್ತಾರೆ. ಏಕೆಂದರೆ ಅಷ್ಟು ದೂರದ ಒಳಹಾದಿ ಅದು. ಕಷ್ಟದಲ್ಲಿ ಸಾಗಬೇಕಾದ ಕಾಡಿನ ರಸ್ತೆ. ಇಂತಹ ಸಂಕಷ್ಟದಲ್ಲಿರುವ ಆ ಹಳ್ಳಿಗರ ಪಾಡೇನು? ಇದನ್ನು ಯಾವ ರಾಜಕೀಯ ವ್ಯಕ್ತಿಯೂ ಪರಾಂಬರಿಸುವುದಿಲ್ಲವೇ?