ವಿದ್ಯಾರ್ಥಿಗಳು ಇಂದು ವಿಷಯವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವುದು ಕಷ್ಟ-ಸುಲಭದ ಮೇಲಲ್ಲ, ಆಸಕ್ತಿಯ ಕ್ಷೇತ್ರ ಎಂಬುದಕ್ಕೂ ಅಲ್ಲ. ಅವರು ಆಯ್ಕೆ ಮಾಡಿಕೊಳ್ಳುವ ವಿಭಾಗವು ಮುಂದಿನ ಉದ್ಯೋಗಕ್ಕೆ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಮಾತ್ರ. ಕಷ್ಟ-ಸುಲಭದ ಆಧಾರದಲ್ಲಿ ಅಧ್ಯಯನದ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿದ್ದರೆ, ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ವಿಭಾಗಗಳ ಬದಲಿಗೆ ಕನ್ನಡವನ್ನೋ ಸಮಾಜ ವಿಜ್ಞಾನವನ್ನೋ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಆ ರೀತಿ ಆಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ, ವಾಣಿಜ್ಯ ವಿಭಾಗದಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲದ ವಿದ್ಯಾರ್ಥಿಗಳು, ಕಲಾ ವಿಭಾಗ ಸುಲಭ ಎಂದು ತಿಳಿದಿದ್ದೂ, ಉದ್ಯೋಗ ಅವಕಾಶದ ಕಾರಣದಿಂದ ವಾಣಿಜ್ಯ ವಿಭಾಗಕ್ಕೆ ಸೇರುವುದನ್ನು ನೋಡಬಹುದು. ಪರೀಕ್ಷೆಗಳಿರುವುದೇ ಜರಡಿ ಹಿಡಿಯುವುದಕ್ಕೆ. ಗಟ್ಟಿಯಿಂದ ಟೊಳ್ಳನ್ನು ಬೇರ್ಪಡಿಸಬೇಕೆಂದರೆ, ಪರೀಕ್ಷೆಗಳಲ್ಲಿ ಕ್ಲಿಷ್ಟ ಪ್ರಶ್ನೆಗಳನ್ನೇ ಕೇಳಬೇಕು ಹಾಗೂ ಮೌಲ್ಯಮಾಪನವೂ ಬಿಗಿಯಾಗಿ ಇರಬೇಕು.