ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಜ ಬದಲಾವಣೆ ನಿಲ್ಲದು

Last Updated 20 ಜನವರಿ 2022, 16:27 IST
ಅಕ್ಷರ ಗಾತ್ರ

‘ಎಲ್ಲರ ಕನ್ನಡ: ತಕರಾರೇಕೆ?’ ಎನ್ನುವ ಬರಹದಲ್ಲಿ (ಚರ್ಚೆ, ಜ. 20) ಡಾ. ಚಲಪತಿ ಅವರು ನನ್ನ ಲೇಖನದಲ್ಲಿನ (ಚರ್ಚೆ, ಜ. 7) ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುತ್ತಾ, ‘ಲಿಪಿ ಬದಲಾವಣೆಯ ಈ ಸವಾಲಿನಲ್ಲಿ ಪ್ರತಿಭಾ ಅವರ ಗಮನವಿರುವುದು ಸಾಹಿತ್ಯ ಮತ್ತು ಸಿನಿಮಾ ಸಾಹಿತ್ಯದ ಕಡೆಗೆ ಮಾತ್ರ. ಕನ್ನಡವನ್ನು ಬದಲಾಯಿಸುವ ಶಕ್ತಿಯಿರುವುದು ಸಾಹಿತ್ಯಕ್ಕೆ ಮಾತ್ರ ಎಂಬಂತಿದೆ ಸಾಹಿತಿಯೂ ಆಗಿರುವ ಅವರ ವಾದ’ ಎಂದಿದ್ದಾರೆ.

ಭಾಷಾಶಾಸ್ತ್ರದ ವಿದ್ಯಾರ್ಥಿನಿಯಾದ ನಾನು, ‘ಕಂಪ್ಯಾರಿಟಿವ್ ದ್ರವಿಡಿಯನ್ ಲಿಂಗ್ವಿಸ್ಟಿಕ್ಸ್’ ಅಧ್ಯಯನಕ್ಕೆ ಪ್ರೊ. ಕುಶಾಲಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ಅಲ್ಪಸ್ವಲ್ಪ ಮಾಹಿತಿ ಪಡೆದಿದ್ದೇನೆ. ಕನ್ನಡದ ಜನರ ಇಂದಿನ ಟ್ರೆಂಡ್ ಬಗ್ಗೆ ಹೇಳಲು ಬಳಸಿದ ಒಂದು ಉದಾಹರಣೆಯನ್ನು ಮುಂದಿಟ್ಟು, ಅದೊಂದರ ಕಡೆಗೆ ಮಾತ್ರ ನನ್ನ ಗಮನ ಎಂದು ಹೇಳಿರುವುದು ಅವರ ಗ್ರಹಿಕೆಯ ಮಿತಿಯಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಅಳವಡಿಕೆಯಲ್ಲಿ ಎನ್‌ಜಿಇಎಫ್‌ನಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿ, ತಾಂತ್ರಿಕ ನಿಘಂಟು ಸಮಿತಿಯ ಸದಸ್ಯೆಯಾಗಿ ಪಡೆದ ಅನುಭವ ನನಗೆ ಇದೆ. ತಾಂತ್ರಿಕ ನಿಘಂಟನ್ನು ಸಂಸ್ಕೃತ ಭೂಯಿಷ್ಠ ಮಾಡಬಾರದೆಂದು ನಾನು ಮತ್ತು ನನ್ನ ಸಹೋದ್ಯೋಗಿ ಹಾಗೂ ಸಹ ಸದಸ್ಯೆಯಾಗಿದ್ದ ಡಾ. ಸಂಧ್ಯಾರೆಡ್ಡಿ ರೋಹಿಡೇಕರ್ ಮುಂತಾದವರೊಡನೆ ಮಾಡುತ್ತಿದ್ದ ಚರ್ಚೆ–ಜಗಳ ನಮಗೆ ಮಾತ್ರ ಗೊತ್ತು. ಪೊಲೀಸ್ ಪದಕ್ಕೆ ಆರಕ್ಷಕ ಎನ್ನುವ ಪದವನ್ನು ರೋಹಿಡೇಕರ್ ಅವರು ಮೊದಲು ಜಾರಿಗೆ ತಂದರೂ ನಂತರ ಪೊಲೀಸ್ ಪದವನ್ನೇ ಕನ್ನಡಕ್ಕೂ ಅಳವಡಿಸಿಕೊಳ್ಳಿ ಎನ್ನುವ ಸರ್ಕಾರಿ ನೋಟಿಸನ್ನು ಹಲವು ಬಾರಿ ಅಧಿಕೃತವಾಗಿ ಹೊರಡಿಸಿದರೂ ಅಷ್ಟರಲ್ಲಾಗಲೇ ಆರಕ್ಷಕ ಎನ್ನುವ ಪದವನ್ನು ಪೊಲೀಸ್ ಇಲಾಖೆ ಜಾರಿಗೆ ತಂದೇ ಬಿಟ್ಟಿತ್ತು.

ಎಂಜಿನೀರಿಂಗ್ ಸ್ಟೆನ್ಸಿಲ್ಸ್ ರೂಪುಗೊಳಿಸಿದ ಪ್ರಥಮ ದೇಶ ಭಾಷೆ ಕನ್ನಡ. ಅದಕ್ಕಾಗಿ ಕನ್ನಡ ವರ್ಣಮಾಲೆಯ ಪ್ರಮಾಣನೀಕರಣ (ಸ್ಟ್ಯಾಂಡರ್‌ಡೈಸೇಷನ್) ಮಾಡುತ್ತಿದ್ದಾಗ ಒತ್ತಕ್ಷರಗಳನ್ನು ಅಳವಡಿಸುವ ಬಗ್ಗೆ ತಜ್ಞರ ಸಮಿತಿ ಎಷ್ಟು ಸಾಹಸ ಮಾಡಿತು ಅನ್ನುವುದು ಗೊತ್ತು. ಕಂಪ್ಯೂಟರ್ ಬರುವ ಮೊದಲು, ಕನ್ನಡ ಸಾಫ್ಟ್‌ವೇರ್ ಕಂಡುಹಿಡಿಯುವ ಮೊದಲು ಕನ್ನಡ ದಸ್ತಾವೇಜುಗಳನ್ನು ಮೈಕ್ರೊಫಿಲಂ ಮಾಡುವಾಗ ಅಕ್ಷರಗಳು ಕಲಸಿಹೋಗುವುದನ್ನು ತಡೆಯಲು ವರ್ಣಮಾಲೆಯ ಪ್ರಮಾಣನೀಕರಣ ಎಷ್ಟು ಅಗತ್ಯವಾಗಿತ್ತು ಇವತ್ತಿನವರಿಗೆ ಗೊತ್ತಿಲ್ಲ. ಅದೃಷ್ಟವಶಾತ್ ಬಹಳ ಬೇಗ ಕಂಪ್ಯೂಟರ್ ಬಂದು ಕನ್ನಡ ಸಾಫ್ಟ್‌ವೇರ್ ಕಂಡುಹಿಡಿದಿದ್ದರಿಂದ ಹಿಂದಿಗಿಂತ ಮೊದಲೇ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲು ಸಾಧ್ಯವಾಯಿತು.

ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆ ಬಗ್ಗೆ ಅತೀವ ಹೆಮ್ಮೆ ಪಡಬೇಕು. ಕನ್ನಡದಲ್ಲಿ ತಾಂತ್ರಿಕ ಪಠ್ಯಗಳನ್ನು ಸಿದ್ಧಪಡಿಸುವ ಕೆಲಸ ಎಷ್ಟು ಕಷ್ಟ ಎನ್ನುವ ಪ್ರಾಯೋಗಿಕ ಅನುಭವ ಇದೆ ನನಗೆ. ನಮಗಿರುವ ಲಿಪಿಯ ಸವಲತ್ತುಗಳನ್ನು ಅನವಶ್ಯಕವಾಗಿ ಬಿಟ್ಟುಕೊಟ್ಟು ಇನ್ನಷ್ಟು ಗೊಂದಲ ಹುಟ್ಟಿಸುವ ವ್ಯರ್ಥ ಯತ್ನಗಳನ್ನು ಒಪ್ಪಲಾಗುವುದಿಲ್ಲ. ಅಸಹಜ ಬದಲಾವಣೆಗಳು- ಅದು ‘ಮೇಲಿನಿಂದ ಆಗಲಿ ಕೆಳಗಿನಿಂದ ಆಗಲಿ’- ನಿಲ್ಲುವುದಿಲ್ಲ. ಸಹಜ ಬದಲಾವಣೆಗಳನ್ನು ನಿಲ್ಲಿಸಲಾಗುವುದಿಲ್ಲ.

–ಪ್ರತಿಭಾ ನಂದಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT