ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಕ್ಷದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಕಾರಣ ಪಕ್ಷಕ್ಕೆ ಇಂಥ ನಡೆ ಅನಿವಾರ್ಯವೂ ಆಗಿತ್ತು. ತಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ನಡೆ–ನುಡಿ ಮೂಲಕ ತೋರಿದ್ದರೂ ಮುಖ್ಯಮಂತ್ರಿ ಗಾದಿ ದಕ್ಕಿಸಿಕೊಳ್ಳುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಇದೆ ಎಂಬುದು ಎಲ್ಲರೂ ಬಲ್ಲ ಸತ್ಯ. ಈ
ಕುರಿತು ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಇದ್ದಿರಬಹುದು. ಅದನ್ನು ನಿವಾರಿಸಲು ಈ ವೇದಿಕೆ ಬಳಕೆಯಾಗಿದೆ. ಇದರ ಹಿಂದೆ ಹೈಕಮಾಂಡ್ ಸೂಚನೆ ಕೆಲಸ ಮಾಡಿರಲೂಬಹುದು. ಏನೇ ಆಗಲಿ, ಕಾರ್ಯಕರ್ತರಿಗೆ ಸಕಾರಾತ್ಮಕ ಸಂದೇಶ ರವಾನಿಸಲು ಈ ಹುಟ್ಟುಹಬ್ಬದ ಕಾರ್ಯಕ್ರಮ ನೆರವಾಗಿದೆ.