ರಾಜ್ಯದಲ್ಲಿನ ರಾಜ್ಯಸಭಾ ಚುನಾವಣೆಯ ಫಲಿತಾಂಶ ನಿರೀಕ್ಷೆಯಂತೆ ಬಂದಿದ್ದು, ಕೆಲವು ಕಟು ವಾಸ್ತವಗಳನ್ನು ತೆರೆದಿಟ್ಟಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ಶಾಸಕರ ಮೇಲೆ ಹೈಕಮಾಂಡ್ ಹಿಡಿತ ಸ್ವಲ್ಪವೂ ಕಡಿಮೆಯಾಗಿಲ್ಲ, ಕರ್ನಾಟಕದಿಂದ ರಾಜ್ಯಸಭೆಗೆ ಕನ್ನಡೇತರರನ್ನು, ಹೊರರಾಜ್ಯದವರನ್ನು ಆಯ್ಕೆ ಮಾಡುವ ಅಲಿಖಿತ ನಿಯಮಾವಳಿಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ, ಬಿಜೆಪಿ ವಿರುದ್ಧ ಒಗ್ಗೂಡುವ ವಿರೋಧ ಪಕ್ಷಗಳ ಪ್ರಯತ್ನ ಕನಸಾಗೇ ಉಳಿಯುತ್ತದೆ ಮತ್ತು ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಮಂತ್ರ ಇನ್ನಷ್ಟು ಧ್ವನಿಯನ್ನು ಕಳೆದುಕೊಳ್ಳುತ್ತದೆ ಎನ್ನುವ ಸತ್ಯಗಳು ಮತ್ತೊಮ್ಮೆ ಅನಾವರಣಗೊಂಡಿವೆ.