ಷೇರು ಹೂಡಿಕೆದಾರರಿಗೆ ದಲ್ಲಾಳಿಗಳು ಅಥವಾ ಕಂಪನಿಗಳಿಂದ ಅನ್ಯಾಯವಾದಾಗ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ಆದರೆ ಅಲ್ಲಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿಯೊಬ್ಬರು ಹಿಮಾಲಯದ ಯೋಗಿಯೊಬ್ಬರ ಜೊತೆ ಅತಿ ದೊಡ್ಡ ಷೇರು ಮಾರುಕಟ್ಟೆಯ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಆತಂಕಕಾರಿ ವಿಷಯವಾಗಿದೆ.
ಹೂಡಿಕೆದಾರರಿಗೆ ಆಗಾಗ ಮಾರ್ಗದರ್ಶನ ಮಾಡುವ, ಪಾಠ ಹೇಳುವ ಸಂಸ್ಥೆಯ ಕಾರ್ಯಾಚರಣೆಯ ಬಗ್ಗೆಯೂ ನಿರಂತರವಾಗಿ ಆಮೂಲಾಗ್ರ ಪರಿಶೋಧನೆ ಮಾಡುತ್ತಿದ್ದರೆ ಮಾತ್ರ ಹೂಡಿಕೆದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ, ಪ್ರತಿಷ್ಠಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬರುತ್ತಿರುವ ಈ ಮಹತ್ತರ ಘಟ್ಟದಲ್ಲಿ ಮೇಲಿನ ಪ್ರಕರಣದ ಕ್ಷಿಪ್ರ ತನಿಖೆ ನಡೆದು, ಆರೋಪಿಗಳಿಗೆ ಕೂಡಲೇ ಶಿಕ್ಷೆಯಾಗುವುದು ಅತ್ಯಗತ್ಯ.