‘ಬೆಕ್ಕು ಇಲ್ಲದ ಮನೆಯಲ್ಲಿ ಇಲಿಗಳು ಲಾಗ ಹಾಕುತ್ತವೆ’ ಎಂದು ಹೇಳುತ್ತಾರೆ! ಈ ಮಾತು ನಮ್ಮ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯೊಂದನ್ನು ನೋಡಿದರೆ ನಿಜ ಎನಿಸುತ್ತದೆ.
ಕಳೆದ ಐದು ವರ್ಷಗಳಲ್ಲಿ ಯಾವ ಶಾಲೆ ಅಥವಾ ಕಾಲೇಜಿನ ಪರೀಕ್ಷಾ ಫಲಿತಾಂಶವು ಆಯಾ ಜಿಲ್ಲೆಯ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಇರುವುದೋ ಅಲ್ಲಿಯ ಸಿಬ್ಬಂದಿಯ ಜೂನ್ ತಿಂಗಳ ವೇತನವನ್ನು ತಡೆಹಿಡಿಯಲು ಉನ್ನತ ಅಧಿಕಾರಿಗಳು ಎಲ್ಲ ಬಿ.ಇ.ಒ.ಗಳಿಗೆ ಸುತ್ತೋಲೆ ಕಳಿಸಿದ್ದಾರೆ.
ಅದರನ್ವಯ ಶಿಕ್ಷಕ-ಶಿಕ್ಷಕಿಯರಿಗೆ ಜೂನ್ ವೇತನ ಇನ್ನೂ ಕೈಗೆ ಬಂದಿಲ್ಲ; ಅದು ಬರುವ ಭರವಸೆಯೂ ಇಲ್ಲ! ಶಿಕ್ಷಣದ ಮಟ್ಟವನ್ನು ಎತ್ತರಿಸಬೇಕು. ಇದು ನಿಜ. ಆದರೆ ದುಡಿದವರ ಹೊಟ್ಟೆಯ ಮೇಲೆ ಹೊಡೆಯಬಾರದು ಅಷ್ಟೇ. ವೇತನ ನಂಬಿರುವ ವರ್ಗವನ್ನು ಹೀಗೆ ಶೋಷಿಸುವುದು ಸರಿಯಲ್ಲ.
ಪ್ರಜಾಪ್ರಭುತ್ವದ ಯುಗದಲ್ಲಿರುವ ನಾವು ಹೇಳುವ-ಕೇಳುವ ಪರಂಪರೆ ಹೊಂದಿರುವಾಗ, ಸರ್ವಾಧಿಕಾರಿ ಧೋರಣೆಯ ಅಧಿಕಾರಿಗಳಿಂದ ಶಿಕ್ಷಕರು ಉಪವಾಸ ಸಾಯಬೇಕೆ? ಇದೇನು ಸರ್ವಾಧಿಕಾರಿ ಭಾರತವೋ ಅಥವಾ ಪ್ರಜಾಪ್ರಭುತ್ವವಾದಿ ಭಾರತವೋ?