ಮಾನವೀಯತೆಯು ಎಲ್ಲಾ ಧರ್ಮ, ಜಾತಿ-ಮತಗಳಿಗಿಂತ ದೊಡ್ಡದು ಎಂಬ ಅಮರೇಶ ಬಿ. ಚರಂತಿಮಠ ಅವರ ಪ್ರತಿಪಾದನೆ (ಸಂಗತ, ನ. 4) ಅತಿ ಪ್ರಮುಖವಾದುದು. ಲಾಕ್ಡೌನ್ ಸಂದರ್ಭದಲ್ಲಿ ನನಗೆ ಕೊರೊನಾ ಸ್ವಯಂ ಸೈನಿಕನಾಗಿ ಪೊಲೀಸ್ ಸಿಬ್ಬಂದಿಯ ಜೊತೆ ಕೆಲಸ ಮಾಡುವ ಅದೃಷ್ಟ ಬಂದಿತ್ತು. ಒಂದು ದಿನ ಬೆಂಗಳೂರಿನ ಕೊಳೆಗೇರಿಯೊಂದಕ್ಕೆ ಊಟ ವಿತರಿಸುವ ಸಲುವಾಗಿ ಹೋಗಿದ್ದೆ. ಅಲ್ಲಿ ನಾನು ಕಂಡ ದೃಶ್ಯ ಕಣ್ಣಲ್ಲಿ ನೀರು ತರಿಸಿತು. ತುತ್ತು ಅನ್ನಕ್ಕಾಗಿ ಜನ ಅಂಗಲಾಚಿ ಬೇಡಿದ್ದು ಹಾಗೂ ಅವರ ಹಸಿವಿನ ತೀವ್ರತೆಯನ್ನು ನೋಡಿ ಬಹಳ ಬೇಸರವಾಯಿತು. ದುರ್ಬಲರಿಗೆ ಒಂದು ಹೊತ್ತಿನ ಊಟ ಹಾಕಿದರೆ ನಮ್ಮ ಆರ್ಥಿಕ ಪರಿಸ್ಥಿತಿಯೇನೂ ಹದಗೆಡುವುದಿಲ್ಲ. ಉಳ್ಳವರು ಇಲ್ಲದವರಿಗೆ ಸ್ವಲ್ಪಮಟ್ಟಿಗೆ ಸಹಾಯ ನೀಡಿ ಮಾನವೀಯತೆ ಮೆರೆಯೋಣ.