ವಿರೋಧ ಪಕ್ಷಗಳ ನಾಯಕರು ಸಹ ಈ ವಿಷಯದಲ್ಲಿ ರಾಜಕೀಯದ ಆಟ ಆಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ರಾಜಕೀಯ ಮೇಲಾಟದಂತೆ ಭಾಸವಾಗುತ್ತದೆ. ಜೊತೆಗೆ ಆಯಾ ಸಮುದಾಯಗಳ ಜನರ ಭಾವನೆಗಳ ಜೊತೆ ಇವರೆಲ್ಲ ಚೆಲ್ಲಾಟ ಆಡುತ್ತಿರುವಂತೆ ತೋರುತ್ತದೆ. ಮೀಸಲಾತಿ ಕೊಡುವುದಾದರೆ ಆಯಾ ಸಮುದಾಯಗಳ ಬಡವರಿಗೆ, ಏನೂ ಇಲ್ಲದ ಕೊನೇ ಸ್ತರದ ವ್ಯಕ್ತಿಗೆ ಕೊಡಲಿ. ಕೆಲವೆಡೆ ಮೀಸಲಾತಿ ಪಡೆಯುವ ವ್ಯಕ್ತಿಯ ತಂದೆ ಒಳ್ಳೆಯ ಸರ್ಕಾರಿ ಹುದ್ದೆಯಲ್ಲಿರುತ್ತಾನೆ ಇಲ್ಲವೇ ದೊಡ್ಡ ಪ್ರಮಾಣದ ಆಸ್ತಿಪಾಸ್ತಿಯ ಒಡೆಯನಾಗಿರುತ್ತಾನೆ. ಅಂತಹ ವ್ಯಕ್ತಿಗೂ ಮೀಸಲಾತಿ ನೀಡಿದರೆ, ಅದೇ ಸಮುದಾಯದ ಮತ್ತೊಬ್ಬ ಬಡವನ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಈ ಬಗೆಯ ಮೀಸಲಾತಿ ನಮ್ಮ ಇಂದಿನ ಸಮಾಜಕ್ಕೆ ಬೇಡ. ಶ್ರೀಮಂತರೇ ಮೀಸಲಾತಿ ಪಡೆಯುತ್ತಾ ಹೋದರೆ ಅದೇ ಸಮುದಾಯದ ಬಡವ ಬಡವನಾಗಿಯೇ ಉಳಿಯುತ್ತಾನೆ.