ಎಕರೆಗೆ ಇಂತಿಷ್ಟು ನೀವು ಹೊತ್ತು ತರಬಹುದು, ಇಂತಹ ದಿನ ಬನ್ನಿ ಎನ್ನುವ ಕೇವಲ ಎರಡು ವಾಕ್ಯಗಳ ಮಾಹಿತಿಯಷ್ಟೇ ನೋಂದಣಿಯ ಬಂಡವಾಳ. ಮೊದಲಿಗೆ, ರಾಗಿ ಖರೀದಿ ಈ ವರ್ಷ ಇಲ್ಲ ಎಂಬ ವದಂತಿಯನ್ನು ಅಧಿಕಾರಿಗಳು ಹಬ್ಬಿಸಿದ್ದರು. ನಂತರದಲ್ಲಿ ಅನೇಕ ಸಚಿವರು, ಶಾಸಕರು ಬಹಳಷ್ಟು ಪ್ರಚಾರ ಪಡೆದ ನಂತರ, ರಾಗಿ ಖರೀದಿಯನ್ನು ಇನ್ನೇನು ಪೂರ್ವಮುಂಗಾರಿನ ಹೊಸ್ತಿಲಲ್ಲಿ ಕೊಳ್ಳಲು ಸರ್ಕಾರ ಮುಂದಾಗಿದೆ. ರಾಗಿಬೆಳೆ ಆರ್ಥಿಕವಾಗಿ ಆದಾಯದ ಬೆಳೆಯಲ್ಲ. ಆದರೂ ಬಯಲುಸೀಮೆಯ ಪ್ರಮುಖ ಬೆಳೆ ಅದು. ರಾಗಿಒಕ್ಕಲು ಬಲುತ್ರಾಸದ ಕಸುಬು. ಹುಲ್ಲಿನ ದೃಷ್ಟಿಯಿಂದ ರೈತರು ರಾಗಿಯನ್ನು ನೆಚ್ಚುತ್ತಾರೆ. ಇಷ್ಟೆಲ್ಲಾ ಶ್ರಮವನ್ನು ಗೌರವಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಅದಕ್ಕೆ ಮಾಡಬೇಕಾದ ಮೂಲಕರ್ತವ್ಯ ರೈತರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು.