ರಾಜ್ಯೋತ್ಸವದ ಈ ಸವಿ ಸಂದರ್ಭದಲ್ಲಿ ನಾಡಿನ ಪ್ರತಿಯೊಬ್ಬರೂ ನಾಳೆಗಳ ಕುರಿತು ಚಿಂತಿಸಬೇಕು. ಸದ್ಯದ ಪರಿಸ್ಥಿತಿಯು ‘ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ’ ಎಂದು ಹೇಳಿ ಮುಗಿಸುವಷ್ಟು ಸರಳವಾಗಿಲ್ಲ. ನಾಡನ್ನು ಬಾಧಿಸುತ್ತಿರುವ ಸಮಸ್ಯೆಗಳು ಹಲವು. ಹಿಂದಿ ಹೇರಿಕೆಯ ಹುನ್ನಾರಗಳು ಬಿರುಸು ಪಡೆದಿವೆ. ರಾಷ್ಟ್ರಮಟ್ಟದ ನೇಮಕಾತಿಗೆ ಸಂಬಂಧಿಸಿದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲದ ಕಾರಣಕ್ಕೆ ನಮ್ಮ ಹುಡುಗರು ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಬೇಕಾಗಿದ್ದ ಸರ್ಕಾರವು ಮೌನ ವಹಿಸಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯ ಮಸುಕಾಗುತ್ತದೆ.