ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಇಡದ, ಯಾವುದೇ ಜಾತಿ, ಪಂಥ, ಧರ್ಮದ ಕಟ್ಟುಪಾಡುಗಳಿಗೆ ಜೋತು ಬೀಳದ ಹಾಗೂ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸದ ನನ್ನ ಅಚಲ ನಿಲುವಿನ ಬಗ್ಗೆ ಅರಿವಿದ್ದೂ ಅವರು ಹೀಗೆ ಪ್ರಶ್ನಿಸಿದರು. ಬಲಪಂಥೀಯ ಚಿಂತನೆಗಳು ಮುನ್ನೆಲೆಗೆ ಬಂದಿರುವ ಈಗಿನ ಸಂದರ್ಭವು ನನ್ನಂತೆ ಯೋಚಿಸುವವರೆಲ್ಲರಿಗೂ ಸತ್ವಪರೀಕ್ಷೆಯ ಕಾಲ. ಏಕೆಂದರೆ, ಜಾತಿ, ಧರ್ಮ, ದೇವರ ಗೊಡವೆಯೇ ಬೇಡವೆಂದರೂ ‘ನಾವು ನಂಬಿದ್ದನ್ನು ನೀವೂ ನಂಬಿದರೆ ನೀವು ಭಾರತೀಯರು, ಇಲ್ಲದಿದ್ದರೆ ನೀವು ಮುಸ್ಲಿಮರು, ಪಾಕಿಸ್ತಾನದವರು’ ಎಂದು ಹಣೆಪಟ್ಟಿ ಕಟ್ಟುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ, ಪೂಜಿಸುವಾ ಬಾರಾ ಬಾರಾ’ ಎಂಬ ಕುವೆಂಪು ವಾಣಿ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ.