ಸುಮಾರು 30- 35 ವರ್ಷಗಳ ಹಿಂದೆ ಶಬರಿಮಲೆಯ ಬಗ್ಗೆಯಾಗಲೀ, ಅಲ್ಲಿ ಅಯ್ಯಪ್ಪನೆಂಬ ಸ್ವಾಮಿಯ ನೆಲೆ ಇರುವ ಬಗ್ಗೆಯಾಗಲೀ ಈ ಭಾಗದ ಜನರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಪರಿಚಯವಾದ ಮೇಲೂ, ನಾರಿಯರಿರಲಿ, ಎಲ್ಲಾ ಪುರುಷರು ಈ ಸಾಹಸಯಾತ್ರೆ ಕೈಗೊಳ್ಳುತ್ತಿರಲಿಲ್ಲ. ಯಾತ್ರೆಯಿಂದಾಗಿ ಎಷ್ಟು ಮಂದಿಗೆ ಸ್ವರ್ಗ ಪ್ರಾಪ್ತಿಯಾಗಿದೆಯೋ ಗೊತ್ತಿಲ್ಲ. ಆದರೆ ಅಯ್ಯಪ್ಪ ಮಾಲೆ ಹಾಕಿದವರು ಕಠಿಣ ನಿಷ್ಠೆ ಪಾಲಿಸುತ್ತಿದ್ದುದನ್ನು ಕಂಡಿದ್ದೇನೆ. ಇದು ತಾತ್ಕಾಲಿಕವಾಗಿಯಾದರೂ ಶಿಸ್ತು- ಸಂಯಮದ ಸಂಕೇತವಾಗಿತ್ತೆನ್ನುವುದಂತೂ ನಿಜ. ಈಗ ಅಂತಹ ಜೀವನ ಮೌಲ್ಯವೇನೂ ಶಬರಿಮಲೆ ಯಾತ್ರೆಯಲ್ಲಿ ಉಳಿದಿಲ್ಲ. ಶಬರಿಮಲೆ ಯಾತ್ರೆಯಷ್ಟೇ ಅಲ್ಲ, ಇಂದಿನ ಯಾವುದೇ ಹಬ್ಬ, ವ್ರತ, ಸಂಪ್ರದಾಯಗಳಲ್ಲೂ ಹಿಂದಿನ ಶ್ರದ್ಧಾನಿಷ್ಠೆಗಳು ಉಳಿದಿಲ್ಲ.