ರಾಜ್ಯದಲ್ಲಿ ಸಾವಿರಾರು ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದು, ಮನೆಮನೆಗೆ ವಿದ್ಯುತ್ ಬಿಲ್ ವಿತರಿಸಲು, ತದನಂತರ ವಸೂಲಾತಿಗೆ ಅವರು ಕಡ್ಡಾಯವಾಗಿ ಹೋಗಬೇಕಾಗಿದೆ. ಇದರಿಂದ ಅವರು ನಿತ್ಯವೂ ಸಾರ್ವಜನಿಕ ಸಂಪರ್ಕದಲ್ಲೇ ಇರಬೇಕಾಗುತ್ತದೆ. ಈಗ ಹಳ್ಳಿಗಳಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ಪ್ರತಿನಿಧಿಗಳಿಗೆ ಸೋಂಕು ತಗುಲಿದರೆ ಅದರ ಹೊಣೆ ಹೊರುವವರು ಯಾರು? ಸರ್ಕಾರವೇ ಅಥವಾ ವಿದ್ಯುತ್ ಕಂಪನಿಗಳೇ ಎಂಬುದು ಸ್ಪಷ್ಟವಿಲ್ಲ. ಈ ಪ್ರತಿನಿಧಿಗಳಿಗೆ ಪಿ.ಎಫ್.ನಂತಹ ಕನಿಷ್ಠ ಸೌಲಭ್ಯ ಸಹ ಇಲ್ಲ. ಹಲವಾರು ಮಂದಿ ಹದಿನಾರು ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಈ ಹಣದಲ್ಲಿ ಅವರು ಸಂಸಾರ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಸಂಕಷ್ಟದ ಈ ಸಮಯದಲ್ಲಿ ಇವರನ್ನು ‘ಕೊರೊನಾ ವಾರಿಯರ್’ಗಳೆಂದು ಪರಿಗಣಿಸಿ, ವಿಮಾ ಸೌಲಭ್ಯ ಮತ್ತು ಇತರ ಸುರಕ್ಷೆಯನ್ನು ಒದಗಿಸಬೇಕು ಮತ್ತು ವೇತನ ಹೆಚ್ಚಿಸಬೇಕು.