‘ಹಿಂದೂ’ ಪದ ಬಳಕೆಯಲ್ಲಿರುವುದರಿಂದ ಆ ಪದ ಎಲ್ಲಿಂದ ಬಂತು, ಹೇಗೆ ಬಂತು ಅನ್ನುವ ಹುಡುಕಾಟದ ಅಗತ್ಯ ಈಗ ಇಲ್ಲ. ಸಂಶಯಾಸ್ಪದ ತೀರ್ಮಾನಗಳಿಂದ ವರ್ತಮಾನ ಮತ್ತು ಭವಿಷ್ಯದಲ್ಲಿ ಮತ್ತೆ ಗೊಂದಲ ಮಾಡಿ ಕೊಳ್ಳಬಾರದು.
ಈಗಾಗಲೇ ಆ ಪದಕ್ಕೊಂದು ಅರ್ಥದ ವ್ಯಾಪ್ತಿ ದಕ್ಕಿದೆ. ಸುಪ್ರೀಂ ಕೋರ್ಟ್ ‘ಹಿಂದೂ’ ಪದವನ್ನು ಒಂದು ಜೀವನ ಕ್ರಮ ಎಂದು ವ್ಯಾಖ್ಯಾನಿಸಿದೆ. ಈಗ ಆಚರಣೆಯಲ್ಲಿರುವ ಜೀವನ ಕ್ರಮವು ನಮಗೆ ತಿಳಿದದ್ದೇ ಆಗಿದ್ದು, ಶ್ರೇಣೀಕೃತ ಹಿಂದುತ್ವಕ್ಕೆ ಬದಲಾಗಿ ಸಮಷ್ಟಿ ಭಾವವನ್ನು ಒಳಗೊಂಡ ಭಾರತೀಯತೆಯ ತತ್ವಕ್ಕೆ ಪುಷ್ಟಿ ನೀಡಬೇಕು ಎಂದು ಸಂಸ್ಕೃತಿ ಚಿಂತಕ ಜಿ. ರಾಮಕೃಷ್ಣ ಅವರು ಸ್ಪಷ್ಟಪಡಿಸಿರುವ ಅಭಿಪ್ರಾಯ (ಪ್ರ.ವಾ., ನ. 12) ಚೆನ್ನಾಗಿದೆ. ಇದೇ ಸಂದರ್ಭದಲ್ಲಿ ಡಾ. ಆರತೀ ಬಿ.ವಿ. ಅವರು ‘ಹಿಂದೂ’ ಪದವನ್ನು ಧರ್ಮ ಎನ್ನುವ ಅರ್ಥಕ್ಕೆ ತಳುಕು ಹಾಕಿ ಆ ಶಬ್ದವನ್ನು ಸನಾತನಕ್ಕೆ ಎಳೆದು ತಂದಿರುವುದು ಸರಿ ಕಾಣುವುದಿಲ್ಲ.
‘ಹಿಂದೂ’ ಪದದ ಹಿಂದೆ ಅಡಗಿ ಕುಳಿತಿರುವ ಶ್ರೇಣೀಕೃತ ತತ್ವಕ್ಕೆ ಬದಲಾಗಿ, ನಾವು ಭಾರತೀಯರು ಅನ್ನುವ ಪರಿಕಲ್ಪನೆಯನ್ನು ಆ ಪದಕ್ಕೆ ತಂದುಕೊಡಲು ಸಾಧ್ಯವೇ? ಆದ್ದರಿಂದ ತಮಗೆ ಸರಿ ಕಂಡ ಅನಿಸಿಕೆಗಳನ್ನು ಚರ್ಚಿಸಲು, ಆಚರಿಸಲು ಬಿಡಿ. ಅದುವೇ ಪ್ರಜಾಪ್ರಭುತ್ವದ ಸೌಂದರ್ಯ. –ತಾ.ಸಿ.ತಿಮ್ಮಯ್ಯ,ಬೆಂಗಳೂರು