ಸರ್ಕಾರದ ಚುಕ್ಕಾಣಿ ಹಿಡಿದವರು ಬದಲಾದಂತೆ, ಪಠ್ಯಪುಸ್ತಕ ಮತ್ತು ಪಠ್ಯಪುಸ್ತಕ ಸಮಿತಿಗಳೂ ಬದಲಾಗುವುದು ಸರಿಯೇ? ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಅಧಿಕಾರ ಕಳೆದುಕೊಳ್ಳುತ್ತವೆ. ಅವುಗಳ ಸಿದ್ಧಾಂತ, ಆರ್ಥಿಕ ಚಿಂತನೆ, ಆಡಳಿತದ ಸ್ವರೂಪ ಬೇರೆ ಬೇರೆಯೇ ಆಗಿರುತ್ತವೆ. ಪಕ್ಷದ ಧೋರಣೆಗೆ ಅನುಸಾರವಾಗಿ ಪಠ್ಯ ಬದಲಿಸುವ ಕೆಲಸ ಆಗಬಾರದು. ರಾಷ್ಟ್ರ ಕಲ್ಪನೆ, ಪ್ರಾದೇಶಿಕ ಪ್ರಜ್ಞೆ, ಇತಿಹಾಸದ ಅರಿವು, ಮನುಷ್ಯತ್ವದ ಚಿಂತನೆಗಳು, ಬಹುತ್ವ ಭಾರತ, ಸಂವಿಧಾನಬದ್ಧ ಕ್ರಿಯಾಶೀಲತೆ ಬೆಳೆಸುವುದು, ಕೌಟುಂಬಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನುಷ್ಯ ಸಂಬಂಧಗಳು, ಆರೋಗ್ಯ, ಹಣಕಾಸು, ವೈಚಾರಿಕ– ವೈಜ್ಞಾನಿಕ ಪ್ರಜ್ಞೆ ಹೀಗೆ ಪಕ್ಷಾತೀತವಾದ, ಎಡ– ಬಲ ಎನ್ನದ ವ್ಯಕ್ತಿಗಳ ಪಠ್ಯ ಮಕ್ಕಳಿಗೆ ಬೇಕಾಗಿದೆ. ಅದಕ್ಕಾಗಿ ಪಠ್ಯಪುಸ್ತಕ ಸಮಿತಿಯು ಇತಿಹಾಸ, ಕಾನೂನು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡಂತೆ ಸಂವಿಧಾನಬದ್ಧವಾಗಿ ರಚನೆಯಾಗಬೇಕು.