ಕೊರೊನಾ ಸೋಂಕಿನ ಕರಿನೆರಳಿನಿಂದ ಜನ ಇನ್ನೂ ಹೊರಬಾರದ ಕಠಿಣ ಸನ್ನಿವೇಶದಲ್ಲಿ ಸರ್ಕಾರ ಒಂದನೇ ತರಗತಿಯಿಂದ ಶಾಲಾರಂಭಕ್ಕೆ ಚಿಂತನೆ ನಡೆಸುತ್ತಿರುವುದು ಪೋಷಕರಲ್ಲಿ ಆತಂಕವನ್ನು ಉಂಟುಮಾಡಿದೆ. ನೆರೆರಾಜ್ಯ ಕೇರಳದಲ್ಲಿ ಈ ಸೋಂಕಿನ ಪ್ರಕರಣಗಳು ಇನ್ನೂ ಹೆಚ್ಚಿಗೆ ವರದಿಯಾಗುತ್ತಿವೆ. ಮಕ್ಕಳು ಅಂತರಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ, ಆಗಾಗ ಕೈ ತೊಳೆಯುವಂತೆ ಮಾಡುವುದು ಕಷ್ಟಸಾಧ್ಯದ ಮಾತು. ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದರೂ, ಎರಡನೇ ಅಲೆ ಸಂದರ್ಭದಲ್ಲಿ ಆಗಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ಪೋಷಕರಲ್ಲಿ ಅಳುಕು ಇದ್ದೇ ಇದೆ.