ಕರ್ನಾಟಕದ ತಥಾಕಥಿತ ಮೈತ್ರಿ ಸರ್ಕಾರದ ಪತನಕ್ಕೆ ಹಲವಾರು ಕಾರಣಗಳಿವೆ. ಅದರಲ್ಲೂ ಪ್ರಮುಖವಾಗಿ, ದೇವೇಗೌಡರ ಕುಟುಂಬ ರಾಜಕಾರಣವು ಅತ್ಯಂತ ನಿರ್ಲಜ್ಜ ರೀತಿಯಿಂದ ಪ್ರದರ್ಶನಗೊಂಡಿತು. ಇದು, ಸ್ವಪಕ್ಷೀಯರಲ್ಲೇ ಅಪನಂಬಿಕೆ, ಅಸಮಾಧಾನದ ಅಲೆ ಏಳಲು ಕಾರಣೀಭೂತವಾಯಿತು. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರಿಗೂ ಮಹತ್ವದ ರಾಜಕೀಯ ಸ್ಥಾನಮಾನ ಕಲ್ಪಿಸಲು, ಜೀವನದ ಮುಸ್ಸಂಜೆಯಲ್ಲಿರುವ ಮಾಜಿ ಪ್ರಧಾನಿಗೆ ಮುಜುಗರವೆನಿಸಲೇ ಇಲ್ಲ! ‘ಸೂಪರ್ ಸಿ.ಎಂ.’ ರೇವಣ್ಣನವರ ದರ್ಬಾರಿಗೆ, ‘ಸಿ.ಎಂ’ ಆಗಿದ್ದವರು ಕಡಿವಾಣ ಹಾಕಲೇ ಇಲ್ಲ. ‘ಸಾಂದರ್ಭಿಕ ಶಿಶು’ ಮುಖ್ಯಮಂತ್ರಿಯ ಆಡಳಿತದಿಂದ ಕರ್ನಾಟಕಕ್ಕೆ ‘ಮುಕ್ತಿ’ ದೊರಕಿದೆ.