‘ನಮ್ಮ ದೇಶದ ಬಹುಸಂಖ್ಯಾತ ಜನಸಮುದಾಯದಲ್ಲಿ ಆಗಿಂದಾಗ್ಗೆ ಜಾತಿ ಜಾತಿಗಳ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತ ಬಂದಿದ್ದರೂ ಒಟ್ಟಾರೆ ಎಲ್ಲರೂ ಎಲ್ಲರ ಜತೆ ಸೌಹಾರ್ದಯುತವಾಗಿ ಬದುಕುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ’ ಎಂಬ ಡಾ. ಆರ್.ಲಕ್ಷ್ಮೀನಾರಾಯಣ ಅವರ ನುಡಿಗಳನ್ನು (ಸಂಗತ, ಮೇ 30) ಓದಿ ಅಚ್ಚರಿಯ ಜತೆಗೆ ಆಘಾತವಾಯಿತು. ಇಂಡಿಯಾ ದೇಶದ ಇತಿಹಾಸದ ಉದ್ದಕ್ಕೂ ಇಂದಿನ ತನಕವೂ ದುಡಿಯುವ ವರ್ಗದ ಕೋಟಿಗಟ್ಟಲೆ ಜನರು ಜಾತಿಯೊಂದರ ಕಾರಣದಿಂದಲೇ ಅನ್ನ, ಬಟ್ಟೆ, ವಸತಿ, ವಿದ್ಯೆ ಮತ್ತು ಆರೋಗ್ಯದಿಂದ ವಂಚಿತರಾಗಿ ಹಸಿವು, ಬಡತನ ಮತ್ತು ಜಾತಿನಿಂದನೆಯ ಅಪಮಾನದಲ್ಲಿ ಬೇಯುತ್ತಿದ್ದಾರೆ. ‘ಸೌಹಾರ್ದಯುತ ವಾಗಿ ಬದುಕುವುದು ಎಂದರೆ ದುರ್ಬಲ ಜಾತಿಯ ಜನರು ತಮ್ಮ ದೀನಸ್ಥಿತಿಯನ್ನು ಒಪ್ಪಿಕೊಂಡು, ತಮ್ಮ ಜಾತಿ ಸಮುದಾಯಗಳಿಗೆ ಹಾಕಿರುವ ವಿಧಿನಿಷೇಧಗಳನ್ನು ಮೀರದೆ, ಮೌನದಿಂದಲೇ ಎಲ್ಲ ಬಗೆಯ ಸಂಕಟಗಳನ್ನೂ ಅನುಭವಿಸುವುದು’ ಎಂದು ಅರ್ಥ.