‘ಇನ್ನು ಮುಂದೆ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ದಾದಾಗಿರಿ’– ಕಳೆದ ಕೆಲವು ದಿನಗಳಿಂದ ಇಂತಹ ಶೀರ್ಷಿಕೆಯು ಪತ್ರಿಕೆಗಳ ಕ್ರಿಕೆಟ್ ಪುಟಗಳಲ್ಲಿ ಕಾಣುತ್ತಿದೆ. ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಸೌರವ್ ಗಂಗೂಲಿ ಅಧ್ಯಕ್ಷರಾಗಿದ್ದು, ಅವರು ಕೋಲ್ಕತ್ತದವರು. ಕರ್ನಾಟಕದಲ್ಲಿ ಅಣ್ಣ, ಉತ್ತರ ಭಾರತದಲ್ಲಿ ಭೈಯ್ಯ, ತಮಿಳುನಾಡಿನಲ್ಲಿ ತಂಬಿ, ಅಂಧ್ರಪ್ರದೇಶ- ತೆಲಂಗಾಣದಲ್ಲಿ ಬಿಡ್ಡ ಎಂದೆಲ್ಲ ಸಂಬೋಧಿಸುವಂತೆ ಪಶ್ಚಿಮ ಬಂಗಾಳದಲ್ಲಿ ದಾದಾ ಎಂದು ಕರೆಯಲಾಗುತ್ತದೆ. ಇದನ್ನೇ ಪತ್ರಿಕೆಗಳು ಉಪಮೆ- ಅಲಂಕಾರದಂತೆ ಬಳಸಿಕೊಂಡು ‘ದಾದಾಗಿರಿ’ ಎಂದು ಶೀರ್ಷಿಕೆ ನೀಡುವುದು ಎಷ್ಟು ಸರಿ? ಕನ್ನಡದಲ್ಲಿ ದಾದಾಗಿರಿಗೆ ಬೇರೆ ಅರ್ಥವೇ ಇದೆ. ಶೀರ್ಷಿಕೆಯನ್ನು ಆಕರ್ಷಕವಾಗಿಸುವುದು ಪತ್ರಿಕೆಗಳಲ್ಲಿ ತೀರಾ ಸಾಮಾನ್ಯ. ಆದರೆ, ಅದು ಒಂದು ಇತಿಮಿತಿಯಲ್ಲಿ ಇರಬೇಕು ಮತ್ತು ಜನಸಾಮಾನ್ಯರು ಅದರ ಅರ್ಥವನ್ನು ಸುಲಭವಾಗಿ ತಿಳಿದುಕೊಳ್ಳುವಂತೆ ಇರಬೇಕು.