ಅಲ್ಲಿನ ರೈತರು ಈ ವಿಶಿಷ್ಟ ಬೇಸಾಯಕ್ರಮವನ್ನು ಈಗಲೂ ಆಚರಿಸುತ್ತಿರುವುದರಿಂದ, ಆ ಪರಿಸರಕ್ಕೇ ಸೂಕ್ತವಾದ ಕೃಷಿಭೂಮಿಯ ಬಳಕೆ ಕ್ರಮವೊಂದು ಆಚರಣೆಯಲ್ಲಿರಲು ಸಾಧ್ಯವಾಗಿದೆ. ಹಾಸುಗಲ್ಲಿನ ಮೇಲಿನ ತೆಳುಮಣ್ಣಿನಲ್ಲಿ ನೀರು ನಿಂತು ಸೃಷ್ಟಿಯಾಗುವ ಈ ತಾತ್ಕಾಲಿಕ ಜೌಗು ಪ್ರದೇಶದಲ್ಲಿ, ರೈತರು ಅನುಸರಿಸುವ ವಿಶಿಷ್ಟ ಬೇಸಾಯ ಕ್ರಮಗಳಿಂದಾಗಿ ಭತ್ತದ ದೇಸಿ ತಳಿಯೊಂದು ವಿಕಾಸವಾಗಿರುವುದು ಗುರುತಿಸಬೇಕಾದ ವಿಷಯ. ನಾಡಿನ ಹಲವೆಡೆ ಇರುವ ಇಂಥ ಹಲವು ವಿಶಿಷ್ಟ ಪಾರಂಪರಿಕ ಕೃಷಿ ವಿಧಾನಗಳು, ಅದೆಷ್ಟೋ ಬಗೆಯ ಕೃಷಿ ಜೀವವೈವಿಧ್ಯವನ್ನು ಈಗಲೂ ಪೋಷಿಸುತ್ತಿವೆ. ಮುಖ್ಯವಾಹಿನಿಯ ಕೃಷಿ ನೀತಿಯು ಈ ತೆರನ ಸುಸ್ಥಿರ ಕೃಷಿ ಪರಂಪರೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೂಕ್ಷ್ಮಗ್ರಾಹಿ ಆಗಬೇಕಾಗಿದೆ.