ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ಕೃಷಿ ಸಂಸ್ಕೃತಿಯ ಅರಿವು

Last Updated 28 ಸೆಪ್ಟೆಂಬರ್ 2020, 15:52 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಹಾನಾಪುರ ಗ್ರಾಮದ ರೈತರು ಈಗಲೂ ಕೈಗೊಳ್ಳುತ್ತಿರುವ ಪಾರಂಪರಿಕ ‘ಚೆಲ್ಲುನೆಲ್ಲು’ ಕೃಷಿಯ ಕುರಿತ ವಿಶೇಷ ವರದಿ (ಪ್ರ.ವಾ., ಸೆ. 28) ಮಾಹಿತಿಪೂರ್ಣವಾಗಿದೆ. ಎರಡು ಸಂಗತಿಗಳಿಗಾಗಿ ಈ ಸುದ್ದಿಚಿತ್ರ ಗಮನಸೆಳೆಯಿತು. ಒಂದು, ಸ್ಥಳೀಯವಾಗಿ ರೈತರು ಬಳಸುವ ಶಬ್ದಗಳನ್ನು ಪರಿಚಯಿಸುತ್ತಲೇ ಈ ಕೃಷಿಯ ವಿಧಾನವನ್ನು ವಿವರಿಸಿರುವುದರಿಂದ ಬಯಲುನಾಡಿನ ಅನನ್ಯ ಕೃಷಿಸಂಸ್ಕೃತಿಯೊಂದರ ಅರಿವಾಯಿತು. ಎರಡನೆಯದು, ಈ ಅಮೂಲ್ಯ ಪಾರಂಪರಿಕ ಕೃಷಿ ವಿಧಾನದ ಕುರಿತು ತಿಳಿಯುವಂತಾಯಿತು.

ಅಲ್ಲಿನ ರೈತರು ಈ ವಿಶಿಷ್ಟ ಬೇಸಾಯಕ್ರಮವನ್ನು ಈಗಲೂ ಆಚರಿಸುತ್ತಿರುವುದರಿಂದ, ಆ ಪರಿಸರಕ್ಕೇ ಸೂಕ್ತವಾದ ಕೃಷಿಭೂಮಿಯ ಬಳಕೆ ಕ್ರಮವೊಂದು ಆಚರಣೆಯಲ್ಲಿರಲು ಸಾಧ್ಯವಾಗಿದೆ. ಹಾಸುಗಲ್ಲಿನ ಮೇಲಿನ ತೆಳುಮಣ್ಣಿನಲ್ಲಿ ನೀರು ನಿಂತು ಸೃಷ್ಟಿಯಾಗುವ ಈ ತಾತ್ಕಾಲಿಕ ಜೌಗು ಪ್ರದೇಶದಲ್ಲಿ, ರೈತರು ಅನುಸರಿಸುವ ವಿಶಿಷ್ಟ ಬೇಸಾಯ ಕ್ರಮಗಳಿಂದಾಗಿ ಭತ್ತದ ದೇಸಿ ತಳಿಯೊಂದು ವಿಕಾಸವಾಗಿರುವುದು ಗುರುತಿಸಬೇಕಾದ ವಿಷಯ. ನಾಡಿನ ಹಲವೆಡೆ ಇರುವ ಇಂಥ ಹಲವು ವಿಶಿಷ್ಟ ಪಾರಂಪರಿಕ ಕೃಷಿ ವಿಧಾನಗಳು, ಅದೆಷ್ಟೋ ಬಗೆಯ ಕೃಷಿ ಜೀವವೈವಿಧ್ಯವನ್ನು ಈಗಲೂ ಪೋಷಿಸುತ್ತಿವೆ. ಮುಖ್ಯವಾಹಿನಿಯ ಕೃಷಿ ನೀತಿಯು ಈ ತೆರನ ಸುಸ್ಥಿರ ಕೃಷಿ ಪರಂಪರೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೂಕ್ಷ್ಮಗ್ರಾಹಿ ಆಗಬೇಕಾಗಿದೆ.

ಕೇಶವ ಎಚ್. ಕೊರ್ಸೆ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT