ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಅವರೊಂದಿಗೆ ಯುವತಿಯೊಬ್ಬರು ‘ಕನ್ಹಯ್ಯ ಕುಮಾರ್ ಅವರೇ ಜೈ ಶ್ರೀರಾಮ್’ ಎಂದು ಹೇಳಿ ಮಾತು ಪ್ರಾರಂಭಿಸಿದ್ದನ್ನು ದೀಪಾ ಹಿರೇಗುತ್ತಿ ಅವರು ವಿರೋಧಿಸಿದ್ದಾರೆ (ಸಂಗತ, ಆ. 19). ಉತ್ತರ ಭಾರತದ ಸಂಸ್ಕೃತಿಯನ್ನು ನಾವು ಅನುಕರಿಸುತ್ತಿದ್ದೇವೆ ಎಂದು ಅವರು ಬರೆದಿದ್ದಾರೆ. ಅಂದರೆ, ಶ್ರೀರಾಮ ಉತ್ತರ ಭಾರತಕ್ಕೆ ಮಾತ್ರ ಸೀಮಿತನೇ? ಆತ ಪ್ರಪಂಚದೆಲ್ಲೆಡೆ ಪ್ರಸಿದ್ಧಿ ಪಡೆದವ. ಥಾಯ್ಲೆಂಡಿನಲ್ಲಿ ರಾಮನ ಆರಾಧನೆಯಿದೆ. ನಾವು ಮಕ್ಕಳಿಗೆ ದೇವರುಗಳ ಹೆಸರು ಇಡುವುದು ಆ ಹೆಸರುಗಳೊಂದಿಗೆ ದೈವಸ್ಮರಣೆಯೂ ಆಗಲೆಂಬ ಸದುದ್ದೇಶದಿಂದ. ದೇವರನ್ನು ನಂಬುವವರು ಈಗಲೂ ದೂರವಾಣಿಯಲ್ಲಿ ‘ರಾಮ್ ರಾಮ್’ ಎಂದೋ ‘ಹರಿ ಓಂ’ ಎಂದೋ ಮಾತು ಪ್ರಾರಂಭಿಸುತ್ತಾರೆ.ಇನ್ನು, ಲೇಖನದಲ್ಲಿ ಹೇಳಿರುವಂತೆ ಉತ್ತರ ಭಾರತವು ವಿದೇಶಿಯರ ದಾಳಿಯಿಂದ ತತ್ತರಿಸಿತು, ನಿಜ.