ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾದರೂ, ವಾಸ್ತವ ವಾಗಿ ಅನುಷ್ಠಾನ ಮಾಡಬೇಕಾದ ಬೋಧಕರೇ ಅಗತ್ಯ ಸಂಖ್ಯೆಯಲ್ಲಿ ಇಲ್ಲವೆಂದರೆ ಹೇಗೆ? ಇವೆಲ್ಲದರ ಪರಿಣಾಮವನ್ನು ನಿಜಕ್ಕೂ ಎದುರಿಸುವವರು ವಿದ್ಯಾರ್ಥಿಗಳು. ಕಲಿಯಬೇಕಿರುವ ಏನನ್ನೂ ಕಲಿಯದೆ ಸೂಕ್ತ ಉದ್ಯೋಗಗಳು ದೊರಕದೆ ಅವರು ನಿರುದ್ಯೋಗಿಗಳಾಗುತ್ತಿದ್ದಾರೆ. ಸುಧಾರಣೆಗಳು ಶುರುವಾಗಬೇಕಾದದ್ದು ಮೊದಲು, ವಿಶ್ವವಿದ್ಯಾಲಯಗಳ ಬಗ್ಗೆ ಆಳುವ ವರ್ಗದವರ ಮನೋಧೋರಣೆಗಳಿಂದ. ಇದು ಆದಾಯ ತರದ ವಲಯವೆಂಬ ತಿರಸ್ಕಾರ ಬಿಟ್ಟು ದೇಶದ ಭವಿಷ್ಯ ರೂಪಿಸುವ ಆದ್ಯತಾ ವಲಯವೆಂದು ಪರಿಗಣಿಸಿ, ಬೋಧಕ ಹುದ್ದೆಗಳನ್ನು ತ್ವರಿತವಾಗಿ, ಪಾರದರ್ಶಕ ವ್ಯವಸ್ಥೆಯ ಮೂಲಕ ತುಂಬಬೇಕಾಗಿದೆ.