ಸಂವಿಧಾನದ ಪ್ರಕಾರ, ಸಂಪುಟದ ರಚನೆ ಮತ್ತು ಪುನರ್ರಚನೆ ಮುಖ್ಯಮಂತ್ರಿಯ ಪರಮಾಧಿಕಾರ. ಆದರೆ ಯಾವೊಬ್ಬ ಮುಖ್ಯಮಂತ್ರಿಯೂ ತನ್ನ ಪರಮಾಧಿಕಾರವನ್ನು ಯುಕ್ತ ರೀತಿಯಲ್ಲಿ ಚಲಾಯಿಸಿಲ್ಲ. ಸಂಪುಟಕ್ಕೆ ಮಂತ್ರಿಗಳನ್ನು ನೇಮಿಸಿಕೊಳ್ಳುವಾಗ ಹಲವಾರು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಜಾತಿಗಳ ಸಮತೋಲನ, ಜಿಲ್ಲಾವಾರು ಪ್ರಾತಿನಿಧ್ಯ, ವೈಯಕ್ತಿಕ ಹಿನ್ನೆಲೆ, ಪಕ್ಷದಲ್ಲಿ ಅವರ ಅನುಭವ, ಹಿರಿಮೆ ಮುಂತಾದವುಗಳನ್ನು ಪರಿಗಣಿಸಬೇಕಾಗುತ್ತದೆ. ಆದರೂ ಯಡಿಯೂರಪ್ಪನವರು ಧೈರ್ಯ ಮಾಡಿ ಕಬ್ಬಿಣದ ಕಡಲೆಯನ್ನು ನುಂಗಿದ್ದಾರೆ. ಅತೃಪ್ತ ಶಾಸಕರ ಅಸಮಾಧಾನವನ್ನು ತಣಿಸಲು ಮುಖ್ಯಮಂತ್ರಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಯ ಪ್ರಹಸನಕ್ಕೆ ತೆರೆಬಿದ್ದಿರುವುದು ಸಮಾಧಾನಕರ ಸಂಗತಿ.