ಮೀಸಲಾತಿಗೆ ಅರ್ಹರಾಗಿದ್ದರೂ ಮೀಸಲಾತಿಯ ಲಾಭವನ್ನು ಪಡೆಯದೆ ಕೋಟ್ಯಂತರ ಜನ ಸಂಕಷ್ಟದಲ್ಲಿರುವುದು ಎಷ್ಟು ಸತ್ಯವೋ ಮೇಲ್ವರ್ಗದವರಲ್ಲಿಯೂ ಶೋಷಿತರಾಗಿ, ಆರ್ಥಿಕವಾಗಿ ಹಿಂದುಳಿದವರಾಗಿ, ದುರ್ಬಲ ಧ್ವನಿವಿಹೀನರಾಗಿ ಇರುವುದು ಅಷ್ಟೇ ಕಟು ಸತ್ಯವಾಗಿದೆ. ದಶಕಗಳಿಂದಲೂ ಪಾಲಿಸಿಕೊಂಡುಬಂದ, ಅವೈಜ್ಞಾನಿಕ ಮೀಸಲಾತಿ ನೀತಿಯನ್ನು ಒಮ್ಮೆ ಚರ್ಚೆಗೊಳಪಡಿಸಿ, ನಿಜವಾಗಿಯೂ ಶೋಷಿತರು, ಆರ್ಥಿಕವಾಗಿ ಹಿಂದುಳಿದವರು, ದುರ್ಬಲರನ್ನು ಗುರುತಿಸಿ ಅವರಿಗೆ ಮೀಸಲಾತಿ ದೊರಕಿಸಿಕೊಡುವಂತಹ ಕೆಲಸವನ್ನು ಮೀಸಲಾತಿಯ ಲಾಭವನ್ನು ಪಡೆಯುತ್ತಿರುವವರು ಹಾಗೂ ಮೀಸಲಾತಿಗಾಗಿ ಹೋರಾಡುತ್ತಿರುವವರು ಒಟ್ಟಾಗಿ ಮಾಡಬೇಕಾದುದು ಆದ್ಯ, ಜವಾಬ್ದಾರಿಯುತ ಕರ್ತವ್ಯವಾಗಿದೆ.