ಕಾಂಗ್ರೆಸ್ ಪಕ್ಷವನ್ನು ಹೀನಾಯ ಸ್ಥಿತಿಯಿಂದ ಹೊರತಂದು ಬಲಪಡಿಸುವುದಕ್ಕೆ ಪೂರಕವಾಗಿ ಉನ್ನತ ಮಟ್ಟದ ಸಭೆ ಕರೆಯುವಂತೆ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕೆಲವು ಹಿರಿಯರು ಈ ಹಿಂದೆ ಪತ್ರ ಬರೆದು ಒತ್ತಾಯಿಸಿದಾಗ, ಈ ನಾಯಕರಲ್ಲಿದ್ದ ತಳಮಳವನ್ನು ಅರಿಯದೆ ಅವರನ್ನು ಮೂಲೆಗುಂಪು ಮಾಡಲಾಯಿತು. ಅಲ್ಲದೆ ಅವರನ್ನೇ ‘ಪಕ್ಷದ ವಿರೋಧಿಗಳು’ ಎಂಬಂತೆ ನಡೆಸಿಕೊಳ್ಳಲಾಯಿತು. ಈಗ ಅಜಯ್ ಮಾಕನ್ ಅವರು ರಾಜಸ್ಥಾನದ ಉಸ್ತುವಾರಿಯಾಗಿ ಮುಂದುವರಿಯುವುದಕ್ಕೆ ನಿರಾಕರಿಸಿ, ತಮ್ಮ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವಂತೆ ಹೊಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಮತ್ತೊಂದು ಕಡೆ, ರಾಜಸ್ಥಾನದಲ್ಲಿ ಪಕ್ಷವು ಕರೆದಿದ್ದ ವಿಧಾನಸಭಾ ಸದಸ್ಯರ ಸಭೆಗೆ ಬಹಿಷ್ಕಾರ ಹಾಕಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಚಿನ್ ಪೈಲಟ್ ಅವರು ಪಕ್ಷದ ಅಧ್ಯಕ್ಷರನ್ನು ಕೋರಿದ್ದಾರೆ.